ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಚೊಚ್ಚಲ ಸಚಿವ ಸಂಪುಟ ವಿಸ್ತರಣೆ ಮತ್ತು ಪುನಾರಚನೆಗೆ ಮಧ್ಯಾಹ್ನ 1.30ಕ್ಕೆ ಮುಹೂರ್ತ ಫಿಕ್ಸ್ ಆಗಿದೆ. 20 ಮಂದಿ ಹೊಸ ಮುಖಗಳಿಗೆ ಸಂಪುಟದಲ್ಲಿ ಸ್ಥಾನ ಸಿಗ್ಯ್ವ ಸಾಧ್ಯತೆ ಇದೆ.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರೈಲ್ವೆ ಸಚಿವ ಸದಾನಂದ ಗೌಡ ಸೇರಿದಂತೆ ಕೆಲ ಸಚಿವರ ಖಾತೆ ಬದಲಾವಣೆಯಾಗುವ ಸಾಧ್ಯತೆಯಿದೆ.
ನ.8ರಂದು ರಾತ್ರಿ 17 ಬಿಜೆಪಿ ಮತ್ತು ಇತರ ಪಕ್ಷಗಳ 3 ಮಂದಿಯ ಹೆಸರು ರಾಷ್ಟ್ರಪತಿಗೆ ರವಾನೆಯಾಗಿದೆ ಎಂದು ಮೂಲಗಳು ಹೇಳಿವೆ. ಗೋವಾ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮನೋಹರ ಪರಿಕ್ಕರ್ ಅವರಿಗೆ ರೈಲ್ವೆ ಖಾತೆ ನೀಡುವುದು ಖಚಿತವಾಗಿದೆ. ಮುಕ್ತಾರ್ ಅಬ್ಬಾಸ್ ನಖ್ವಿ, ರಾಜೀವ್ ಪ್ರತಾಪ್ ರೂಡಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವ ಸಂಭವವಿದೆ. ತೆಲುಗುದೇಶಂ ಸಂಸದ ವೈ.ಎಸ್.ಚೌಧರಿ ಅವರಿಗೆ ರಾಜ್ಯ ದರ್ಜೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ.
ಶಿವಸೇನೆಯ ಅನಿಲ್ ದೇಸಾಯಿ ಹಾಗೂ ಸುರೇಶ್ ಪ್ರಭು ಅವರ ಹೆಸರು ಕೇಳಿಬರುತ್ತಿದೆಯಾದರೂ, ಮಹಾರಾಷ್ಟ್ರ ಸರ್ಕಾರದಲ್ಲಿ ಶಿವಸೇನೆ ಸೇರ್ಪಡೆ ವಿಚಾರದಲ್ಲಿ ಇನ್ನೂ ಗೊಂದಲ ಇರುವ ಕಾರಣ, ಸೇನೆಯು ತನ್ನ ಅಂತಿಮ ಪಟ್ಟಿಯನ್ನು ರವಾನಿಸಿಲ್ಲ ಎನ್ನಲಾಗಿದೆ.
ಸದ್ಯ ಕೇಂದ್ರ ಸಚಿವ ಸಂಪುಟದಲ್ಲಿ ಮೋದಿ ಸೇರಿದಂತೆ 23 ಸಂಪುಟ ದರ್ಜೆ ಸಚಿವರು, 22 ರಾಜ್ಯ ದರ್ಜೆ ಸಚಿವರು ಸೇರಿ 45 ಮಂದಿ ಇದ್ದಾರೆ. 22 ರಾಜ್ಯ ಸಚಿವರ ಪೈಕಿ 10 ಮಂದಿ ಸ್ವತಂತ್ರ ನಿರ್ವಹಣೆ ಹೊಣೆ ಹೊತ್ತಿದ್ದಾರೆ. ಆರು ಸಚಿವರು ಹಲವಾರು ಹೆಚ್ಚುವರಿ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.
ಗೋವಾದ ನಿರ್ಗಮಿತ ಮುಖ್ಯಮಂತ್ರಿ ಮನೋಹರ ಪರಿಕ್ಕರ್, ಬಿಜೆಪಿಯ ಮುಸ್ಲಿಂ ಮುಖಂಡ ಮುಕ್ತಾರ್ ಅಬ್ಟಾಸ್ ನಖ್ವಿ, ಪಕ್ಷದ ಮಹಾರಾಷ್ಟ್ರ ಪ್ರಭಾರಿ ರಾಜೀವ್ ಪ್ರತಾಪ್ ರೂಡಿ, ಪಂಜಾಬ್ನ ಹೋಶಿಯಾರ್ಪುರ ಸಂಸದ ಬಿಜೆಪಿಯ ದಲಿತ ಮುಖಂಡ ವಿಜಯ್ ಸಾಂಪ್ಲಾ, ಲೋಕಸಭೆ ಚುನಾವಣೆ ವೇಳೆ ಆರ್ಜೆಡಿ ತೊರೆದು ಬಿಜೆಪಿ ಸೇರಿ ಸಂಸದರಾಗಿರುವ ಬಿಹಾರದ ರಾಮ ಕೃಪಾಲ್ ಯಾದವ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡಾ, ಉತ್ತರಾಖಂಡದ ಅಜಯ್ ಟಮಟಾ, ಹಿರಿಯ ನಾಯಕ ಯಶವಂತ ಸಿನ್ಹಾ ಅವರ ಪುತ್ರ ಜಯಂತ್ ಸಿನ್ಹಾ, ಹರ್ಯಾಣದ ಜಾಟ್ ನಾಯಕ ಬೀರೇಂದರ್ ಸಿಂಗ್, ಬಿಹಾರದ ಭೂಮಿಹಾರ್ ಸಮುದಾಯದ ಮುಖಂಡ ಗಿರಿರಾಜ್ ಸಿಂಗ್, ರಾಜಸ್ಥಾನ ಬಿಜೆಪಿ ಸಂಸದರಾದ ಕರ್ನಲ್ ಸೋನಾರಾಮ್ ಚೌಧರಿ, ಗಜೇಂದ್ರ ಸಿಂಗ್, ಮಹಾರಾಷ್ಟ್ರದ ಹನ್ಸರಾಜ್ ಅಹಿರ್, ಛತ್ತೀಸ್ಗಢದ ರಮೇಶ್ ಬ್ಯಾಸ್, ತೆಲುಗುದೇಶಂ ಸಂಸದ ವೈ.ಎಸ್.ಚೌಧರಿ ಅವರಿಗೆ ಮಂತ್ರಿ ಸ್ಥಾನ ಪಕ್ಕಾ ಎನ್ನಲಾಗುತ್ತಿದೆ. ಗಾಯಕ ಬಾಬುಲ್ ಸುಪ್ರಿಯೋ ಮತ್ತು ಮಾಜಿ ಶೂಟರ್ ರಾಜ್ಯವರ್ಧನ ರಾಠೊಡ್ ಸಂಭಾವ್ಯ ಸಚಿರ ಹೆಸರಲ್ಲಿ ಕೇಳಿಬರುತ್ತಿದೆ.