ನವದೆಹಲಿ : ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸದ್ಯ ಪಾಕಿಸ್ತಾನ- ಆಫ್ಘಾನಿಸ್ತಾನ ಗಡಿಯಲ್ಲಿ ಇದ್ದಾನೆ. ಆತನಿಗೆ ಪಾಕಿಸ್ತಾನ ಆಶ್ರಯ ಒದಗಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ದಾವೂದ್ನ ಬೆನ್ನತ್ತಲಿದೆಯೇ ಎಂಬ ಪ್ರಶ್ನೆಗೆ, ನಮಗೆ ಸ್ವಲ್ಪ ಕಾಲಾವಕಾಶ ನೀಡಿ. ದಯಮಾಡಿ ಕಾಯಿರಿ. ರಣತಂತ್ರಗಳನ್ನು ಬಹಿರಂಗಪಡಿಸಲು ಆಗದು. ಅದಕ್ಕೆ ಕಾಲಮಿತಿಯೂ ಇರುವುದಿಲ್ಲ. ಪಾಕಿಸ್ತಾನ ಆದಷ್ಟು ಶೀಘ್ರ ದಾವೂದ್ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಪಾಕ್ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಹಿಂದುಸ್ತಾನ್ ಟೈಮ್ಸ್ ದಿನಪತ್ರಿಕೆ ಆಯೋಜಿಸಿದ್ದ ನಾಯಕತ್ವ ಶೃಂಗದಲ್ಲಿ ಮಾತನಾಡಿದ ಅವರು, ದಾವೂದ್ ಪಾಕಿಸ್ತಾನದಲ್ಲೇ ಇದ್ದಾನೆ. ಆತನನ್ನು ಹಸ್ತಾಂತರಿಸುವಂತೆ ಭಾರತ ಹಲವು ಬಾರಿ ಕೋರಿಕೆ ಇಟ್ಟಿದ್ದರೂ ಪಾಕಿಸ್ತಾನ ಆ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಪಾಕಿಸ್ತಾನದ ಜತೆ ಸೌಹಾರ್ದಯುತ ಸಂಬಂಧ ಹೊಂದಲು ಭಾರತ ಬಯಸುತ್ತಿದೆ. ಆದರೆ, ಸ್ನೇಹಯುತ ಸಂಬಂಧ ಸ್ಥಾಪನೆ ಬಗ್ಗೆ ಪಾಕಿಸ್ತಾನಕ್ಕೇ ಆಸಕ್ತಿ ಇಲ್ಲ. ಭಾರತದಲ್ಲಿ ಕಂಡುಬಂದಿರುವ ಭಯೋತ್ಪಾದನೆ ಇಲ್ಲಿನದ್ದಲ್ಲ. ಅದು ಸಂಪೂರ್ಣ ಪಾಕಿಸ್ತಾನ ಪ್ರಾಯೋಜಿತ. ಈ ಕೃತ್ಯಗಳಲ್ಲಿ ದೇಶಾತೀತ ಉಗ್ರರು ಪಾಲ್ಗೊಂಡಿದ್ದಾರೆ ಎಂದು ಆ ದೇಶ ಹೇಳುತ್ತದೆ. ಹಾಗಾದರೆ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ದೇಶಾತೀತ ಸಂಸ್ಥೆಯೇ? ಆ ಸಂಸ್ಥೆಯೇ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.