ಮದುರೈ : ತಮಿಳುನಾಡಿನ ನಾಗಪಟ್ಟಣಂಗೆ ಸೇರಿದ ನಾಲ್ವರು ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಸಿಬ್ಬಂದಿ, ಶ್ರೀಲಂಕಾ ಗಡಿ ಪ್ರವೇಶ ಮಾಡಿದ ಆರೋಪದ ಮೇಲೆ ಬಂಧಿಸಿದೆ.
ನಾಗಪಟ್ಟಣಂನಲ್ಲಿನ ಪುಷ್ಪವನಂ ಗ್ರಾಮದ ನಿವಾಸಿಗಳಾದ ನಾಲ್ವರು ಮೀನುಗಾರರು, ಮೀನು ಹಿಡಿಯಲು ಸಮುದ್ರಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಕಾಣೆಯಾಗಿದ್ದರು ಎಂದು ಪ್ರಕರಣ ದಾಖಲಿಸಲಾಗಿತ್ತು.
ಸಮುದ್ರದಲ್ಲಿ ಅಲೆಗಳ ಹೆಚ್ಚಾಗಿದ ಪರಿಣಾಮ ಜೀವರಕ್ಷಣೆಗಾಗಿ ಶ್ರೀಲಂಕಾ ಸಮುದ್ರ ಗಡಿ ಭಾಗದತ್ತ ತೆರಳಿದ್ದಾರೆ. ಈ ವೇಳೆ ಗಸ್ತು ತಿರುಗುತ್ತಿದ್ದ ಶ್ರೀಲಂಕಾ ನೌಕಾ ಪಡೆ ಸಿಬ್ಬಂದಿಗಳು ಈ ನಾಲ್ವರು ಮೀನುಗಾರರನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ಈ ನಾಲ್ವರು ಮೀನುಗಾರರು ಶ್ರೀಲಂಕಾದ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಮೀನುಗಾರಿಕಾ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಮೀನುಗಾರರು ಕಾಣೆಯಾದ ಸುದ್ದಿ ತಿಳಿಯುತ್ತಿದ್ದಂತೆ ಅವರ ಪತ್ತೆಗಾಗಿ ಕರಾವಳಿ ಪೊಲೀಸರು ಹಾಗೂ ಕರಾವಳಿ ರಕ್ಷಣಾ ಸಿಬ್ಬಂದಿ ಮುಂದಾದರು. ಬಂಧಿತ ನಾಲ್ವರು ಮೀನುಗಾರರನ್ನು ಶ್ರೀಲಂಕಾದಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ಸ್ಪಷ್ಪಪಡಿಸಿದ್ದಾರೆ.
ಕಳೆದ ಭಾನುವಾರ ಶ್ರೀಲಂಕಾ ಸಮುದ್ರ ಗಡಿ ದಾಟಿದ ಆರೋಪದ ಮೇರೆಗೆ 14 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿತ್ತು. ಬಂಧಿತ ಮೀನುಗಾರರನ್ನು ಬಿಡುಗಡೆಗೊಳಿಸಲು ತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಕಾನೂನಿನ ಹೋರಾಟದಲ್ಲಿ ನಿರತರಾಗಿದ್ದಾರೆ.