ನವದೆಹಲಿ : ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಹಾಯಕ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರ ವಿವಾದಾತ್ಮಕ ಹೇಳಿಕೆಯನ್ನು ಪ್ರತಿಭಟಿಸಿ ಲೋಕಸಭೆಯಲ್ಲಿ ವಿಪಕ್ಷಗಳು ಕೋಲಾಹಲ ಸೃಷ್ಟಿಸಿವೆ.
ಪ್ರಶ್ನೋತ್ತರ ವೇಳೆ ಆರಂಭವಾದಾಕ್ಷಣ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸಾಧ್ವಿ ನಿರಂಜನ ಜ್ಯೋತಿ ಹೇಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು, ಮಾತ್ರವಲ್ಲದೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವೆ ರಾಜಿನಾಮೆ ನೀಡಬೇಕೆಂದು ಪಟ್ಟು ಹಿಡಿದರು.
ಖರ್ಗೆಯವರ ಹೇಳಿಕೆಗೆ ಉತ್ತರಿಸಿದ ಬಿಜೆಪಿ, ಮೋದಿಯವರು ಸಂಸತ್ ಕಲಾಪದಲ್ಲಿ ಭಾಗವಹಿಸಿ,ಮಾತನಾಡಲಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಸಮಾಧಾನವಾಗದ ಕಾಂಗ್ರೆಸ್ ಸದಸ್ಯರು ತೃಣಮೂಲ ಕಾಂಗ್ರೆಸ್ ಮತ್ತು ಇತರ ವಿಪಕ್ಷ ನಾಯಕರೊಂದಿಗೆ ಸೇರಿ ತಮ್ಮ ಪಟ್ಟನ್ನು ಇನ್ನಷ್ಟು ಬಿಗಿಗೊಳಿಸಿದವು.
ಹಲವಾರು ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದಾಗ ಕಾಂಗ್ರೆಸ್ ಮತ್ತು ತೃಣಮೂಲ ಪಕ್ಷದ ಸದಸ್ಯರು ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿ ಕಲಾಪಕ್ಕೆ ತಡೆಯೊಡ್ಡಿದ್ದಾರೆ.