ನವದೆಹಲಿ : ಕಪ್ಪುಹಣದ ವಿಚಾರದಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿದ ತನಿಖೆಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ಜಿನೇವಾದ ಎಚ್ಎಸ್ಬಿಸಿ ಬ್ಯಾಂಕ್ನಲ್ಲಿ ಹಣ ಇಟ್ಟಿರುವ ಒಟ್ಟು 627 ಮಂದಿ ಖಾತೆದಾರರ ಹೆಸರು ಸರ್ಕಾರದ ಬಳಿ ಇದೆ. ಒಂದು ವೇಳೆ ಯಾವುದಾದರೂ ಕಾರಣಕ್ಕೆ ಮಾ.31ರೊಳಗೆ ತನಿಖೆ ಪೂರ್ಣಗೊಳ್ಳದೆ ಹೋದರೆ ಸರ್ಕಾರ ಅಂತಿಮ ಗಡುವು ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತದೆ ಎನ್ನುವ ವಿಶ್ವಾಸ ಇದೆ ಎಂದು ನ್ಯಾಯಾಲಯ ತಿಳಿಸಿದೆ.
ಮುಖ್ಯ ನ್ಯಾ.ಎಚ್. ಎಲ್. ದತ್ತು ಅವರಿದ್ದ ಪೀಠವು ಪ್ರಕರಣಕ್ಕೆ ಸಂಬಂಧಿಸಿ ನೇಮಿಸಲಾಗಿರುವ ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ಸ್ಥಿತಿಗತಿ ವರದಿಯ ಒಂದು ಪ್ರತಿಯನ್ನು ಸರ್ಕಾರಕ್ಕೆ ನೀಡುವಂತೆಯೂ ಸೂಚಿಸಿದೆ.
ಜತೆಗೆ, ಅರ್ಜಿದಾರರಿಗೆ ಕಪ್ಪುಹಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮರೆಮಾಚದೆ ನೀಡುವಂತೆಯೂ ಆದೇಶಿಸಿದೆ. ಹಿಂದಿನ ಸಾಲಿಸಿಟರ್ ಜನರಲ್ ಮೋಹನ್ ಪರಾಸರನ್ ಅವರು ತಮಗೆ ಕೆಲವು ದಾಖಲೆಗಳನ್ನು ಮರೆಮಾಚಿದ ರೀತಿಯಲ್ಲಿ ನೀಡಿದ್ದರು ಎಂದು ಅರ್ಜಿದಾರರಲ್ಲಿ ಒಬ್ಬರಾಗಿರುವ ಖ್ಯಾತನ್ಯಾಯಾವಾದಿ ರಾಮ್ ಜೇಠ್ಮಲಾನಿ ಆರೋಪಿಸಿದ್ದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಜ.20ಕ್ಕೆ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.