ನವದೆಹಲಿ : ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯ್ಯದ್ ಹಮ್ಮಿಕೊಂಡಿರುವ ರ್ಯಾಲಿಗೆ ಅಲ್ಲಿನ ಸರ್ಕಾರ ಅನುಮತಿ ನೀಡಿರುವುದು ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದು, ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಉಗ್ರ ಹಫೀಜ್ ಸಯ್ಯದ್ ರ್ಯಾಲಿಗೆ ಅನುಮತಿ ನೀಡುವ ಮೂಲಕ ಜಾಗತಿಕವಾಗಿ ಭಯೋತ್ಪಾದನೆ ವಿರುದ್ಧ ಇರುವ ಅಭಿಪ್ರಾಯವನ್ನು ಪಾಕಿಸ್ತಾನ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಭಾರತ ಸರ್ಕಾರ ಪಾಕ್ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಹಫೀಜ್ ಸಯ್ಯದ್, 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು ಆತನಿಗೆ ಶಿಕ್ಷೆ ವಿಧಿಸಲು ಪಾಕಿಸ್ತಾನ ಸರ್ಕಾರಕ್ಕೆ ಕಳೆದ 6 ವರ್ಷಗಳಿಂದ ಒತ್ತಾಯಿಸುತ್ತಿದೆ. ಆದರೂ ಪಾಕ್ ಸರ್ಕಾರ ಉಗ್ರ ಹಫೀಜ್ ನನ್ನು ಸಮರ್ಥಿಸಿಕೊಳ್ಳುವುದೂ ಅಲ್ಲದೇ ಲಾಹೋರ್ ನಲ್ಲಿ ಆತ ಆಯೋಜಿಸಿರುವ ರ್ಯಾಲಿಗೆ ಅನುಮತಿಯನ್ನು ನೀಡಿ ಇದಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿರುವ ಪತ್ರಿಕಾಗೋಷ್ಟಿಗೆ ವಿಶೇಷ ರೈಲಿನ ವ್ಯವಸ್ಥೆ ಕೂಡ ಮಾಡಿದೆ.
ಭಾರತದ ಒತ್ತಡದ ನಡುವೆಯೂ ಪಾಕ್ ಸರ್ಕಾರ ರಾಜಾರೋಷವಾಗಿಯೇ ಉಗ್ರರಿಗೆ ರ್ಯಾಲಿಗಳನ್ನು ಹಮ್ಮಿಕೊಳ್ಳಲು ಅನುಮತಿ ನೀಡಿರುವುದನ್ನು ಸರ್ಕಾರ ತೀವ್ರವಾಗಿ ಖಂಡಿಸಿದೆ.