Untitled Document
Sign Up | Login    
Dynamic website and Portals
  
December 4, 2014

ಗೋದಾಮುಗಳ ಕೊರತೆ ನೀಗಲು ಕ್ರಮ: ಕೃಷ್ಣ ಬೈರೇಗೌಡ

ಬೆಂಗಳೂರು : ರಾಜ್ಯದಲ್ಲಿ ರೈತರು ಬೆಳೆದ ಬೆಳೆಗಳನ್ನು ಸಂಗ್ರಹಿಸಡಲು ಗೋದಾಮುಗಳ ಕೊರತೆಯಿದ್ದು, ರಾಜ್ಯದ ಎಲ್ಲ ಭಾಗಗಳಲ್ಲಿ ವೈಜ್ಞಾನಿಕ ಗೋದಾಮುಗಳನ್ನು ಸದ್ಯದಲ್ಲೇ ಪ್ರಾರಂಭಿಸಲಾಗುವುದು ಎಂದು ಕೃಷಿ ರಾಜ್ಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ನಬಾರ್ಡ್ ವತಿಯಿಂದ 1700 ಕೋಟಿ ರೂ. ಸಹಾಯಧನ ಕೋರಲಾಗಿದೆ. ಈ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ರಾಜ್ಯದಲ್ಲಿ 5 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಸಂಗ್ರಹಿಸುವ ಸಾಮರ್ಥ್ಯ ಗೋದಾಮುಗಳಿಗೆ ಇದೆ. 10 ಲಕ್ಷ ಮೆಟ್ರಿಕ್ ಟನ್ ಸಂಗ್ರಹಣಾ ಸಾಮರ್ಥ್ಯದ ಗೋದಾಮುಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

ಪ್ರಕೃತಿ ವಿಕೋಪದಿಂದ ನಷ್ಟಕ್ಕೊಳಗಾದ ರೈತರಿಗೆ ರಾಜ್ಯ ಸರ್ಕಾರ ಈ ವರೆಗೆ 537 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ ಎಂದ ಸಚಿವರು, ಈರುಳ್ಳಿ ಪರಿಹಾರ ಧನ 36 ಕೋಟಿ ರೂ.ಗಳನ್ನು ಈ ವಾರದಲ್ಲಿ ರೈತರಿಗೆ ವಿತರಿಸಲುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮುಂಗಾರು ಹಂಗಾಮಿಗೆ ಈ ವರ್ಷ ವಿವಿಧ ಕೃಷಿ ಬೆಳೆಗಳ ಬಿತ್ತನೆ ಗುರಿ 74 ಲಕ್ಷ ಹೆಕ್ಟೇರ್ ಪ್ರದೇಶವಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ 69.35 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದೆ ಎಂದರು. ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಗುರಿ 33.70 ಲಕ್ಷ ಹೆಕ್ಟೇರ್ ಆಗಿದ್ದು, ನವೆಂಬರ್ ಅಂತ್ಯಕ್ಕೆ 25.18 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಕಾರ್ಯ ಕೈಗೊಳ್ಳಲಾಗಿದೆ ಎಂದರು. ನವೆಂಬರ್ ಅಂತ್ಯದ ವರೆಗೆ ಒಟ್ಟು 1.44 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ತಿಳಿಸಿದರು. ಉತ್ಪಾದನೆ ಗುರಿ 135 ಲಕ್ಷ ಟನ್ ಆಗಿದ್ದು, ಪ್ರಾಥಮಿಕ ಅಂದಾಜು ಪ್ರಕಾರ 128 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆಯನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಈ ಸಾಲಿನಲ್ಲಿ ಶೇ. 3 ರಿಂದ 4 ರಷ್ಟು ಇಳುವರಿ ಕುಂಥಿತವಾಗಬಹುದು ಎಂದು ಹೇಳಿದರು. ಇದರಿಂದಾಗಿ ಆಹಾರ ಭದ್ರತೆಯ ದೃಷ್ಟಿಯಿಂದ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಅವರು ವಿವರಿಸಿದರು.

ಬೆಳೆ ಹಾನಿಗೆ ರಾಜ್ಯ ಸರ್ಕಾರದ ವತಿಯಿಂದ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಲಾಗಿದೆ ಎಂದ ಸಚಿವರು, ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದಿಂದ ಹಣ ಇನ್ನೂ ಬಿಡುಗಡೆಯಾಗಿಲ್ಲ ಎಂದು ಹೇಳಿದರು.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ರಾಜ್ಯದ 186 ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. 185 ಕೇಂದ್ರಗಳ ಸ್ಥಾಪನೆಗೆ ಕಾರ್ಯಾದೇಶ ನೀಡಲಾಗಿದೆ. ಎರಡು ವರ್ಷಗಳ ಮಟ್ಟಿಗೆ ಸರ್ಕಾರದಿಂದ ಹಣವನ್ನೂ ನೀಡಲಾಗುವುದು. ನಂತರ ಆ ಸಂಸ್ಥೆಯವರೇ ನಡೆಸಿಕೊಂಡು ಹೋಗುತ್ತಾರೆ ಎಂದು ತಿಳಿಸಿದರು.

ಮುಂದಿನ ಮೂರು ವರ್ಷಗಳಲ್ಲಿ ಸರ್ಕಾರ ಎಲ್ಲ ರೈತರ ಕೃಷಿ ಭೂಮಿಯ ಮಣ್ಣು ಪರೀಕ್ಷೆ ಮಾಡಿ, ಮಣ್ಣಿನ ಆರೋಗ್ಯ ಕಾರ್ಡ್ ನೀಡಲು ಪ್ರಸಕ್ತ ವರ್ಷದಿಂದಲೇ ಮಣ್ಣಿನ ಆರೋಗ್ಯ ಅಭಿಯಾನ ಕಾರ್ಯಕ್ರಮ ಆರಂಭಿಸಲಾಗುವುದು ಎಂದರು. ಸರ್ಕಾರದ ಮಟ್ಟದಲ್ಲಿ 23 ಮಣ್ಣು ಪರೀಕ್ಷಾ ಕೇಂದ್ರಗಳಿದ್ದು, ಜೊತೆಗೆ ಖಾಸಗಿ ಪ್ರಯೋಗಾಲಯಗಳಲ್ಲೂ ಮಣ್ಣು ಪರೀಕ್ಷೆ ಮಾಡಿಕೊಡಲಾಗುವುದು ಎಂದರು.

ಬೆಳೆ ಪರಿಹಾರ ಹಣವನ್ನು ಮಳೆ ಆಧಾರಿತ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ 4500 ರೂ. ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದ ಸಚಿವರು, ಆಯಾ ಹಂಗಾಮಿನಲ್ಲೇ ರೈತರಿಗೆ ಪರಿಹಾರದ ಹಣ ನೇರವಾಗಿ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಆಹಾರ ಧಾನ್ಯಗಳ ಬೆಲೆ ಕುಸಿತಗೊಂಡಾಗ ಸರ್ಕಾರ ಮಧ್ಯ ಪ್ರವೇಶಿಸಿ, 1800 ಕೋಟಿ ರೂ. ವೆಚ್ಚದಲ್ಲಿ ಬೆಂಬಲ ಬೆಲೆಯಲ್ಲಿ ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಲಾಗಿದೆ. ಹಿಂದೆಂದೂ ಈ ದಾಖಲೆ ಮೊತ್ತದಲ್ಲಿ ಆಹಾರ ಧಾನ್ಯ ಖರೀದಿಸಲಾಗಿಲ್ಲ ಎಂದು ಸಚಿವರು ತಿಳಿಸಿದರು.

ಕೃಷಿಯಲ್ಲಿ ಮೂಲಭೂತ ಯೋಜನೆಗಳ ಕೊರತೆಗಳನ್ನು ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳಬೇಕು ಎಂಬುದು ನಮ್ಮ ಇಲಾಖೆಯ ಚಿಂತನೆಯಾಗಿದೆ. ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು ರೈತರ ಅಭಿವೃದ್ಧಿಗೆ ಮತ್ತು ಅವರು ಬೆಳೆಯುವ ಬೆಳೆಗಳ ಇಳುವರಿ ಹೆಚ್ಚಿಸಲು ಸದಾ ಚಿಂತನೆ ನಡೆಸಬೇಕೆಂದು ಅಭಿಪ್ರಾಯ ಪಟ್ಟ ಅವರು ಮುಂದಿನ 4 ವರ್ಷದಲ್ಲಿ ಶೇ. 25 ರಷ್ಟು ಇಳುವರಿ ಹೆಚ್ಚಿಸುವುದು ಸರ್ಕಾರದ ಗುರಿ ಎಂದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited