ವಾಷಿಂಗ್ ಟನ್ : 'ಜಮ್ಮು-ಕಾಶ್ಮೀರ'ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರ್ಯಾಲಿಗೂ ಮುನ್ನ ನಡೆದಿರುವ ಉಗ್ರರ ದಾಳಿಯನ್ನು ಅಮೆರಿಕಾ ತೀವ್ರವಾಗಿ ಖಂಡಿಸಿದೆ. ಭಯೋತ್ಪಾದನೆಯನ್ನು ಬುಡ ಸಮೇತ ನಾಶ ಮಾಡಲು ಭಾರತಕ್ಕೆ ಸಹಕಾರ ನೀಡುವುದಾಗಿ ಅಮೆರಿಕಾ ಘೋಷಿಸಿದೆ.
ಶಾಂತ ರೀತಿಯಿಂದ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಹಳಿ ತಪ್ಪಿಸಲು ವ್ಯವಸ್ಥಿತ ರೀತಿಯಲ್ಲಿ ಅಖಾಡಕ್ಕೆ ಇಳಿದಿರುವ ಉಗ್ರರು, ಜಮ್ಮು- ಕಾಶ್ಮೀರದ ವಿವಿಧೆಡೆ ಶುಕ್ರವಾರ ಒಂದೇ ದಿನ ನಾಲ್ಕು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದರು.
ಗುಂಡಿನ ದಾಳಿಯಲ್ಲಿ ಮೃತಪಟ್ಟಿರುವ ಭಾರತೀಯ ಯೋಧರ ಸಾವಿಗೆ ಸಂತಾಪ ಸೂಚಿಸಿರುವ ಅಮೆರಿಕಾ, ಭಯೋತ್ಪಾದನೆಯ ನಿಗ್ರಹಕ್ಕೆ ಭಾರತದೊಂದಿಗೆ ಕೈ ಜೋಡಿಸುವುದಾಗಿ ಭರವಸೆ ನೀಡಿದೆ. ಕಾಶ್ಮೀರದ ವಿಷಯದಲ್ಲಿ ನಮ್ಮ ನೀತಿಗಳು ಬದಲಾಗಿಲ್ಲ. ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಭಯೋತ್ಪಾದಕರ ದಾಳಿ ಬಗ್ಗೆ ಕಾಳಜಿ ಇದೆ ಎಂದು ಅಮೆರಿಕಾ ತಿಳಿಸಿದೆ. ಇದೇ ವೇಳೆ ಕಾಶ್ಮೀರ ವಿವಾದದಲ್ಲಿ ತಾನು ಮಧ್ಯಪ್ರವೇಶಿಸುವುದಿಲ್ಲ ಎಂಬ ಮಾತನ್ನು ಪುನರುಚ್ಛರಿಸಿರುವ ಅಮೆರಿಕಾ, ಈ ವಿವಾದವನ್ನು ಭಾರತ ಹಾಗೂ ಪಾಕಿಸ್ತಾನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಆದರೆ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ತಡೆಯಲು ಭಾರತಕ್ಕೆ ಬೆಂಬಲ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದೆ.
ಜಮ್ಮು-ಕಾಶ್ಮೀರದಲ್ಲಿ ಡಿ.8ರಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರನ್ನು ಗುರಿಯಾಗಿರಿಸಿಕೊಂಡು ಲಷ್ಕರ್-ಎ-ತೋಯ್ಬಾ ಉಗ್ರರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.