ನವದೆಹಲಿ : ನೂತನ ಯೋಜನಾ ಆಯೋಗದ ಕುರಿತು ರೂಪರೇಷೆ ತಯಾರಿಸುವ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ.
ಮೋದಿ ಅವರು ಪ್ರಧಾನಿಯಾದ ನಂತರ ಸಿಎಂಗಳ ಸಭೆ ಕರೆದಿರುವುದು ಇದೇ ಮೊದಲು. ಯೋಜನಾ ಆಯೋಗವನ್ನು ರದ್ದುಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಚರ್ಚೆ ನಡೆಸಲು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.
ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದಾರೆ. ಆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ,ಹಾಗೂ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸಭೆಗೆ ಗೈರು ಹಾಜರಾಗಿದ್ದಾರೆ.
ಯೋಜನಾ ಆಯೋಗದ ಬದಲು ನೂತನ ಆಯೊಗ ರಚಿಸಲು ಮೋದಿ ಚಿಂತನೆ ನಡೆಸಿದ್ದು, ನೂತನ ಆಯೋಗದ ಕಾರ್ಯವೈಖರಿ ಕುರಿತು ಆಯೋಗದ ಕಾರ್ಯದರ್ಶಿ ಸಿಂಧುಶ್ರೀ ಖುಲ್ಲರ್ ಅವರು ಮಾಹಿತಿ ನೀಡಲಿದ್ದಾರೆ. ಬಳಿಕ ಈ ವೇಳೆ ಎಲ್ಲ ಮುಖ್ಯಮಂತ್ರಿಗಳ ಅಭಿಪ್ರಾಯಗಳನ್ನು ಪಡೆದುಕೊಳ್ಳಲಿದ್ದಾರೆ.
ಹೊಸದಾಗಿ ರಚಿಸಲಾಗುತ್ತಿರುವ ಆಯೋಗದಲ್ಲಿ 8 ರಿಂದ 10 ಮಂದಿ ಕಾರ್ಯನಿರ್ವಾಹಕ ಸದಸ್ಯರು ಇರುವ ಸಾಧ್ಯತೆ ಇದೆ. ಈ ಪೈಕಿ ಅರ್ಧದಷ್ಟು ಮಂದಿ ರಾಜ್ಯದವರು ಪ್ರತಿನಿಧಿಸಲಿರುವರು. ಇನ್ನು ವಿವಿಧ ಕ್ಷೇತ್ರಗಳ ಪರಿಣಿತರು ಆಯೋಗದ ಸದಸ್ಯರಾಗಲಿದ್ದಾರೆ. ಕಳೆದ ಮೇ ತಿಂಗಳಿನಲ್ಲಿ ನೂತನ ಆಯೋಗ ರಚಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿತ್ತು.