ನವದೆಹಲಿ : ಖಾಪ್ ಪಂಚಾಯತ್ ಗಳೂ ಸೇರಿದಂತೆ ಯಾವುದೇ ಸಾಂಪ್ರದಾಯಿಕ ನ್ಯಾಯಾಲಯಗಳು ಅಸಾಂವಿಧಾನಿಕ ಎಂದು ಕೇಂದ್ರ ಕಾನುನು ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
ಸಂಸತ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸದಾನಂದ ಗೌಡ, ಸಾಂಪ್ರದಾಯಿಕ ನ್ಯಾಯಾಲಯಗಳು ದೇಶದ ಕಾನೂನಿಗೆ ವಿರುದ್ಧವಾಗಿದ್ದು ಇಂತಹ ನ್ಯಾಯಾಲಯಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಎಲ್ಲಾ ರಾಜ್ಯಗಳಿಗೂ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಸಾಂಪ್ರದಾಯಿಕ ನ್ಯಾಯಾಲಯಗಳು ಗಂಭೀರವಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸದಾನಂದ ಗೌಡರು ಹೇಳಿದ್ದಾರೆ. ಬಿಜೆಡಿ ಸಂಸದ ರವೀಂದ್ರ ಕುಮಾರ್ ಅವರು ಪಶ್ಚಿಮ ಬಂಗಾಳದಲ್ಲಿ ಸಾಂಪ್ರದಾಯಿಕ ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಸದಾನಂದ ಗೌಡರು ಉತ್ತರಿಸುತ್ತಿದ್ದರು.
ಇದೇ ವೇಳೆ ನಾರಿ ಅದಾಲತ್( ಮಹಿಳಾ ನ್ಯಾಯಾಲಯಗಳ) ಬಗ್ಗೆಯೂ ಮಾತನಾಡಿದ ಸದಾನಂದ ಗೌಡರು, ಮಹಿಳೆಯರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಮಹಿಳಾ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ರಾಜ್ಯಗಳಿಗೆ ಪತ್ರ ಬರೆಯುವುದಾಗಿ ಸಂಸತ್ ಗೆ ತಿಳಿಸಿದ್ದಾರೆ.