ನವದೆಹಲಿ : ಪ್ರಸಕ್ತ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕ ಬೆಳವಣಿಗೆ ಚೇತರಿಕೆಯಾಗಲಿರುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಕಳೆದ 2 ವರ್ಷಗಳಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದರ ಪರಿಣಾಮ ಆರ್ಥಿಕ ಬೆಳವಣಿಗೆ ಕುಂಟಿತವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಆರ್ಥಿಕತೆ ಚೇತರಿಕೆಯಾಗಲಿದ್ದು, 2015-16ನೇ ಸಾಲಿನಲ್ಲಿ ಉತ್ತಮಗೊಳ್ಳಲಿದೆ ಎಂದು ಹೇಳಿದ್ದಾರೆ.
2008ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ಉಂಟಾಗುವವರೆಗೂ ಭಾರತದ ಆರ್ಥಿಕತೆ ಶೇ.9ರಷ್ಟು ದಾಟುವ ನಿರೀಕ್ಷೆ ಇತ್ತು. ಆದರೆ ಜಾಗತಿಕ ಮಟ್ಟದಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದರ ಪರಿಣಾಮ 2012-13, 2013-14ರಲ್ಲಿ ಜಿಡಿಪಿ ದರ ಶೇ.5ಕ್ಕೆ ಕುಸಿದಿತ್ತು ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಶೇ.4.9ರಷ್ಟಿದ್ದ ಆರ್ಥಿಕ ಬೆಳವಣಿಗೆ ಪ್ರಸಕ್ತ ಸಾಲಿನ ಪ್ರಥಮಾರ್ಧದಲ್ಲಿ ಶೇ.5.5ರಷ್ಟು ಏರಿಕೆ ಕಂಡಿತ್ತು. ಕೇಂದ್ರ ಸರ್ಕಾರ, 2014-15ನೇ ಸಾಲಿನಲ್ಲಿ ಜಿಡಿಪಿ ದರ ಶೇ.4.7ರಿಂದ ಶೇ.5.5ಕ್ಕೆ ಏರಿಕೆಯಾಗುವ ನಿರೀಕ್ಷೆ ಹೊಂದಿದೆ.
ಇದೇ ವೇಳೆ ಮಾತನಾಡಿದ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್, ಐಎಂಎಫ್ ನಿರೀಕ್ಷೆಯಂತೆ ಆರ್ಥಿಕ ಬೆಳವಣಿಗೆ ದಾಖಲಿಸುವ ಕೆಲವೇ ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. 2014-15ನೇ ಸಾಲಿನಲ್ಲಿ ಭಾರತದ ಜಿಡಿಪಿ ಶೇ.5.6ರಷ್ಟಾಗುವ ಐಎಂಎಫ್ ನಿರೀಕ್ಷೆ ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.