ಬೆಂಗಳೂರು : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಪತ್ರಿಕಾ ಮಂಡಳಿ ಮಾಜಿ ಅಧ್ಯಕ್ಷ ನ್ಯಾ. ಮಾರ್ಕಾಂಡೇಯ ಕಾಟ್ಜು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವವರೆಗೂ ಕಾಂಗ್ರೆಸ್ ಪುನಶ್ಚೇತನಗೊಳ್ಳಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಸತ್ಯಂ ಬ್ರೂಯಾತ್'ಎಂಬ ಬ್ಲಾಗ್ ಬರೆದಿರುವ ಕಾಟ್ಜು, ದೆಹಲಿಯಲ್ಲಿ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ಕಾಂಗ್ರೆಸ್ ಹೋರಾಡುತ್ತಿದೆ. ದಲಿತ, ಅಲ್ಪಸಂಖ್ಯಾತ ಮತಗಳು ಆಪ್ ಪಕ್ಷದತ್ತ ಆಕರ್ಷಿತವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಕುಸಿದಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನ ಮೂವರು ನಾಯಕರನ್ನು ಇತ್ತೀಚೆಗಷ್ಟೇ ಭೇಟಿ ಮಾಡಿರುವುದಾಗಿ ಹೇಳಿರುವ ಕಾಟ್ಜು ಅವರೊಂದಿಗೆ ಯುಪಿಎ ಸರ್ಕಾರದ ಹಗರಣಗಳ ಬಗ್ಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಸೋನಿಯಾ ಗಾಂಧಿ, ಉಪಾಧ್ಯಕ್ಷ ಸ್ಥಾನದಲ್ಲಿ ರಾಹುಲ್ ಗಾಂಧಿ ಇರುವವರೆಗೂ ಅವರ ಪಕ್ಷ ಉದ್ಧಾರವಾಗುವುದಿಲ್ಲ ಎಂದು ಕಾಂಗ್ರೆಸ್ ನಯಾಕರಿಗೆ ತಿಳಿಸಿರುವುದಾಗಿ ಮಾರ್ಕಾಂಡೇಯ ಕಾಟ್ಜು ಹೇಳಿದ್ದಾರೆ. ತಮ್ಮ ಅಭಿಪ್ರಾಯವನ್ನು ಕೇಳಿದ ಕಾಂಗ್ರೆಸ್ ನಾಯಕರು ಏನೂ ಹೇಳಲಿಲ್ಲ ಎಂದು ಕಾಟ್ಜು ತಿಳಿಸಿದ್ದಾರೆ.
ಯುಪಿಎ ಸರ್ಕಾರದಲ್ಲಿ ನಿರಂತರವಾಗಿ ಹಗರಣಗಳು ನಡೆಯುತ್ತಿದ್ದವು, ಪ್ರತಿಯೊಂದು ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಏನು ಮಾಡುತ್ತಿದ್ದರು ಹಗರಣಗಳಿಂದ ಬಂದಿರುವ ಹಣ ಎಲ್ಲಿಗೆ ಹೋಗಿದೆ ಎಂಬುದರ ಬಗ್ಗೆ ಈ ಇಬ್ಬರಿಗೂ ಮಾಹಿತಿ ಇದೆ. ಕಾಂಗ್ರೆಸ್ ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಪಕೀರ್ತಿ ಎಂದು ಕಾಟ್ಜು ಅಭಿಪ್ರಾಯಪಟ್ಟಿದ್ದಾರೆ.