ನವದೆಹಲಿ : ಪೆಟ್ರೋಲ್ ಬೆಲೆ ಇಳಿದಿದೆಯೋ ಇಲ್ಲವೋ? ನಿಮಗೆ ಹಣ ಉಳಿತಾಯವಾಗುತ್ತಿಲ್ಲವೇ? ಆದರೆ ನನ್ನ ವಿರೋಧಿಗಳು, ಪೆಟ್ರೋಲ್ ಬೆಲೆ ಇಳಿಕೆಯಲ್ಲಿ ಮೋದಿ ಪ್ರಯತ್ನ ಏನು ಎಂದು ಪ್ರಶ್ನಿಸುತ್ತಾರೆ. ನನ್ನ ಅವಧಿಯಲ್ಲಿ ಬೆಲೆ ಇಳಿಯೋಕೆ ಅದೃಷ್ಟ ಕಾರಣವಂತೆ. ಹಾಗಾದರೆ ನಾನು ಅದೃಷ್ಟವಂತನಾಗಿರುವುದು ದೇಶಕ್ಕೆ ಲಾಭ. ಹಾಗಾಗಿ ನಿಮಗೆ ಅದೃಷ್ಟವಂತ ಪ್ರಧಾನಿ ಬೇಕೋ? ದುರದೃಷ್ಟವಂತರ ಸರ್ಕಾರ ಬೇಕೋ? ನೀವೇ ಹೇಳಿ ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ ಜನತೆಗೆ ಪ್ರೆಶ್ನಿಸಿದ್ದಾರೆ.
ನವದೆಹಲಿಯ ದ್ವಾರಕದಲ್ಲಿ ಬೃಹತ್ ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತ ಕಾಂಗ್ರೆಸ್ ಮತ್ತು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನನಗಾಗಿ ನಾನು ನಿಮ್ಮಲ್ಲಿ ಏನನ್ನೂ ಬೇಡುವುದಿಲ್ಲ. ದೆಹಲಿ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಎರಡೂ ರಾಜ್ಯಗಳಲ್ಲೂ ನೀರಿನ ಸಮಸ್ಯೆ ಇತ್ತು. ಆದರೆ ಅದಕ್ಕೆ ಪರಿಹಾರ ಸಿಕ್ಕಿಲ್ಲವಾಗಿತ್ತು. ಈಗ ಹರಿಯಾಣದಲ್ಲಿ ಬಿಜೆಪಿ ಸರ್ಕಾರ ಇದೆ. ನೀರಿನ ಸಮಸ್ಯೆಯನ್ನು ಪರಿಹರಿಸಿದ್ದೇವೆ. ಅದೇ ರೀತಿಯಲ್ಲಿ ದೆಹಲಿಗೆ ಸ್ಥಿರ ಸರ್ಕಾರ ಬೇಕು. ಈ ಬಾರಿ ನೀವು ಬಿಜೆಪಿಯನ್ನು ಗೆಲ್ಲಿಸಿ ಎಂದು ಜನರಲ್ಲಿ ಪ್ರಧಾನಿ ಮೋದಿ ಮನವಿ ಮಾಡಿಕೊಂಡರು.
ಸ್ವಂತ ಮನೆ ಹೊಂದುವ ಆಸೆ ಎಲ್ಲರಿಗೂ ಇದೆ. ಪೊಳ್ಳು ಭರವಸೆಗಳಿಂದ ಸರ್ಕಾರ ನಡೆಸಲು ಸಾಧ್ಯವಿಲ್ಲ. ಆದರೆ ಬಡವರನ್ನು ಹಾಗೇ ಉಳಿಸೋ ರಾಜಕೀಯ ನಡೆದಿದೆ. ಮುಗ್ದ ಮುಖಮಾಡಿ ದೆಹಲಿ ಜನತೆಗೆ ಮೋಸ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಮತದಾರರು ಎಚ್ಚರದಿಂದ ಇರಬೇಕು ಎಂದು ಎಎಪಿ ವಿರುದ್ಧ ಕಿಡಿಕಾರಿದರು.