ನವದೆಹಲಿ : 'ಗುಜರಾತ್' ಗಲಭೆ ಸಂತ್ರಸ್ತರ ನಿಧಿಯನ್ನು ದುರುಪಯೋಗಪಡಿಸಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಸೆಟಲ್ವಾಡ್, ಆಕೆಯ ಪತಿ ಜಾವೇದ್ ಆನಂದ್ ಸೇರಿದಂತೆ ಇತರ ಆರೋಪಿಗಳ ನಿರೀಕ್ಷಣಾ ಜಾಮೀನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ತೀಸ್ತಾ ಸೆಟಲ್ವಾಡ್ ಹಾಗೂ ಇತರ ಆರೋಪಿಗಳನ್ನು ಬಂಧಿಸುವ ಹಾಗಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಇದೇ ವೇಳೆ ವಶಕ್ಕೆ ಪಡೆದು ನಿಧಿ ದುರುಪಯೋಗದ ಬಗ್ಗೆ ವಿಚಾರಣೆ ನಡೆಸುವ ಗುಜರಾತ್ ಪೊಲೀಸರ ಉದ್ದೇಶವನ್ನು ಪ್ರೀಂ ಕೋರ್ಟ್ ಪ್ರಶ್ನಿಸಿದೆ. ಪ್ರಕರಣದ ಸಂಬಂಧ ಅರೋಪಿಗಳನ್ನು ವಶಕ್ಕೆ ಪಡೆದೇ ಏಕೆ ವಿಚಾರಣೆ ನಡೆಸಬೇಕು ಎಂಬುದನ್ನು ಸ್ಪಷ್ಟನೆ ನೀಡುವಂತೆ ಗುಜರಾತ್ ಪೊಲೀಸರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಪೊಲೀಸರ ವಶದಲ್ಲಿ ವಿಚಾರಣೆ ನಡೆಸುವಂತಹ ಪ್ರಕರಣ ಇದಾಗಿಲ್ಲವಾದ್ದರಿಂದ ತೀಸ್ತಾ ಸೆಟಲ್ವಾಡ್ ಹಾಗೂ ಇತರ 8 ಆರೋಪಿಗಳನ್ನು ಬಂಧಿಸದಂತೆ ಸುಪ್ರೀಂ ಆದೇಶ ನೀಡಿದೆ.
ಇದೇ ವೇಳೇ ಸಂತ್ರಸ್ತರ ನಿಧಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಗುಜರಾತ್ ಪೊಲೀಸರಿಗೆ ನೀಡುವಂತೆ ಸುಪ್ರೀಂ ಕೋರ್ಟ್ ಆರೋಪಿಗಳಿಗೆ ಸೂಚನೆ ನೀಡಿದೆ.
ಗುಜರಾತ್ ಗಲಭೆ ಸಂತ್ರಸ್ತರಿಗಾಗಿ ಸ್ಥಾಪಿಸಲಾಗಿದ್ದ ಗುಲ್ಬರ್ಗ್ ಸೊಸೈಟಿಗೆ ಸಂದಾಯವಾಗಿದ್ದ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಆರೋಪಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.