ನವದೆಹಲಿ : ಪರೀಕ್ಷಾ ಸಮಯ ಹತ್ತಿರ ಬರುತ್ತಿರುವಂತೆ ವಿದ್ಯಾರ್ಥಿಗಳಲ್ಲಿ ಹುರುಪು ತುಂಬಿದ ಪ್ರಧಾನಿ ನರೇಂದ್ರ ಮೋದಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವಂತೆ ಮನ್ ಕೀ ಬಾತ್'ನಲ್ಲಿ ಕರೆ ನೀಡಿದ್ದಾರೆ.
ಪ್ರಮುಖವಾಗಿ ಸ್ಪರ್ಧಾತ್ಮಕ, ಮಂಡಳಿ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸಂಜೆ ರೇಡಿಯೋ ಭಾಷಣ ಮಾಡಿದ ಪ್ರಧಾನಿ ಮೋದಿ, ಪರೀಕ್ಷೆ ಎದುರಿಸಲು ಆತ್ಮ ವಿಶ್ವಾಸವಿರಲಿ. ಈ ಬಗ್ಗೆ ತಳಮಳಗೊಳ್ಳದೆ ಬದುಕನ್ನು ಕೊನೆಗಾಣಿಸುವ ಯತ್ನಕ್ಕೆ ಮುಂದಾಗಬಾರದು. ಅತಿ ಹೆಚ್ಚು ಅಂಕ ಪಡೆವ ಉದ್ದೇಶವಿರಬೇಕು. ಹೊರತಾಗಿ ಕೆಟ್ಟ ಸ್ಪರ್ಧೆ ಬೇಡ ಎಂದು ಪೋಷಕರಿಗೂ ಕಿವಿ ಮಾತು ಹೇಳಿದರು.
ಪರೀಕ್ಷೆ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾಗಿದ್ದು, ನಾನು ವಿದ್ಯಾರ್ಥಿಗಳೊಂದಿಗಿದ್ದೇನೆ. ಅತಿ ಹೆಚ್ಚು ಅಂಕ ಪಡೆಯುವುದು ಹೇಗೆ ಎಂದು ನಾನು ಹೇಳುವುದಿಲ್ಲ. ಆದರೆ ಹೇಗೆ ಎದುರಿಸಬಹುದು ಎಂದು ಹೇಳಬಲ್ಲೆ ಎಂದರು.
ಇದೇ ವೇಳೆ ಕ್ರೀಡಾಪಟು ಸರ್ಜೀ ಬುಬ್ಕಾ ಉದಾಹರಣೆ ನೀಡಿದ ಮೋದಿ, ಬುಬ್ಕಾ ತಮ್ಮದೇ ಆದ 35 ವಿಶ್ವ ದಾಖಲೆಗಳನ್ನು ಮುರಿದರು. ಅವರು ತಮ್ಮ ದಾಖಲೆಗಳನ್ನೇ ಅಳಿಸಿ ಸಾಧನೆ ಮಾಡಿದರು ಹೊರತು ಬೇರೆಯವರದ್ದಲ್ಲ. ಹಾಗೆಯೇ ಸ್ಪರ್ಧೆ ನಮ್ಮಲ್ಲೇ ಹೆಚ್ಚಾಗಬೇಕು ಹೊರತು ಬೇರೆಯವರೊಂದಿಗಲ್ಲ. ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಬೇಕು. ಸಿದ್ಧತೆ, ಕಠಿನ ಪರಿಶ್ರಮ ಮೂಲಕ ಸಾಧಿಸಬೇಕಿದೆ ಎಂದು ಹೇಳಿದರು.
ನಮ್ಮದೇ ಆದ ಗುರಿಗಳನ್ನು ಸೃಷ್ಟಿಸಿ ಅವುಗಳನ್ನು ತಲುಪುತ್ತಾ ಹೋಗಬೇಕು. ಆಗ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ. ಪರೀಕ್ಷೆಗಳು ನಮ್ಮ ಸಾಮರ್ಥ್ಯಗಳನ್ನು ಹೇಳಲು ಇರುವ ಒಂದು ಮಾರ್ಗ ಬದಲಿಗೆ ಇತರರಿಗೆ ತೋರಿಸಲು ಅಲ್ಲ ಎಂದು ಅವರು ಹೇಳಿದರು.