ನವದೆಹಲಿ : ಗುಜರಾತ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಾರಿ ಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನು ದೇಶಾದ್ಯಂತ ವಿಸ್ತರಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧ ಕುರಿತು ರಾಜ್ಯಗಳಿಗೆ ಸಲಹೆ ನೀಡಬಹುದೇ ಎಂದು ಪ್ರಧಾನಿ ಕಾರ್ಯಾಲಯವು ಕಾನೂನು ಖಾತೆಯ ಅಭಿಪ್ರಾಯ ಕೇಳಿದೆ.
ಗೋವು, ಹಾಲು ನೀಡುವ ಪ್ರಾಣಿಗಳನ್ನು ರಕ್ಷಿಸಲು ಸಂವಿಧಾನದಲ್ಲಿ ಅವಕಾಶವಿದೆ. ಸಂವಿಧಾನದ 48ನೇ ವಿಧಿಯು ಕೃಷಿ, ಪಶು ಸಂಗೋಪನೆ, ಪಶುಗಳ ತಳಿ ಕಾಪಾಡುವ ಕಾರಣಕ್ಕಾಗಿ ಪಶುಗಳು ಮತ್ತು ಹಾಲು ಕೊಡುವ ಪ್ರಾಣಿಗಳನ್ನು ವಧೆ ಮಾಡದಂತೆ ತಡೆಯುವ ಅಧಿಕಾರವನ್ನು ರಾಜ್ಯ ಸರಕಾರಗಳಿಗೆ ನೀಡುತ್ತದೆ ಎಂದು ಕಾನೂನು ಖಾತೆಗೆ ಬರೆದಿರುವ ಪತ್ರದಲ್ಲಿ ಪ್ರಧಾನಿ ಕಾರ್ಯಾಲಯ ಉಲ್ಲೇಖೀಸಿದೆ.
ಇತ್ತೀಚಿನ ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಲಾಗಿದೆ. ಈ ರಾಜ್ಯಗಳ ಅಥವಾ ಗುಜರಾತ್ ನಲ್ಲಿ ಜಾರಿಗೆ ತರಲಾದ ಇದೇ ಮಾದರಿಯ ಕಾನೂನನ್ನು ’ಮಾದರಿ ಕಾನೂನು' ಎಂದು ಪರಿಗಣಿಸಿ, ಪರಿಶೀಲಿಸುವ ನಿಟ್ಟಿನಲ್ಲಿ ಬೇರೆ ರಾಜ್ಯಗಳಿಗೆ ಕಳುಹಿಸಿಕೊಡಬಹುದೇ ಎಂಬುದರ ಬಗ್ಗೆ ಪರಿಶೀಲಿಸಿ ಮತ್ತು ಸಲಹೆ ನೀಡಿ ಎಂದು ಕಾನೂನು ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ. ಅಲ್ಲದೇ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದ ಗುಜರಾತ್ ಸರಕಾರದ ಕ್ರಮವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ನ ತೀರ್ಪನ್ನೂ ಪತ್ರದಲ್ಲಿ ಉಲ್ಲೇಖೀಸಲಾಗಿದೆ.
ಈ ಹಿಂದೆಯೂ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಗಳು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದ ಉದಾಹರಣೆಗಳಿವೆ. ಇದನ್ನು ಒಪ್ಪಿಕೊಳ್ಳುವುದು, ಬಿಡುವುದು ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ಹೀಗಾಗಿ ಸಲಹೆ ನೀಡುವುದರಲ್ಲಿ ತಪ್ಪೇನಿಲ್ಲ ಎಂಬ ಆಲೋಚನೆಯಲ್ಲಿ ಸರ್ಕಾರವಿದೆ ಎನ್ನಲಾಗಿದೆ.
ಉತ್ತರ ಪ್ರದೇಶದ, ಝಾರ್ಖಂಡ್, ಗುಜರಾತ್ ನಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ಇತ್ತೀಚೆಗೆ ಮಹಾರಾಷ್ಟ್ರದಲ್ಲೂ ಕಾನೂನು ಜಾರಿ ಮಾಡಲಾಗಿದೆ.