ನವದೆಹಲಿ : ಮುಸ್ಲಿಂ ಲೀಗ್, ಕಾಶ್ಮೀರ ಪ್ರತ್ಯೇಕವಾದಿ ಮುಖಂಡ ಮಸರತ್ ಆಲಂ ಬಿಡುಗಡೆಗೆ ಸಂಸತ್ ನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಅಸ್ಥಿತ್ವದಲ್ಲಿದ್ದು, 120 ಜನರ ಸಾವಿಗೆ ಕಾರಣವಾಗಿರುವ ಪ್ರತ್ಯೇಕವಾದಿ ಮುಖಂಡ ಮಸರತ್ ಆಲಂ ಬಿಡುಗಡೆ ಮಾಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕೆಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ವಿಪಕ್ಷಗಳ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗದ್ದಲ ಉಂಟಾದ ಕಾರಣ ಕಲಾಪವನ್ನು ಮುಂದೂಡಲಾಗಿದೆ.
ರಾಜ್ಯಸಭೆಯಲ್ಲೂ ವಿವಾದ ಭುಗಿಲೆದ್ದಿದ್ದು, ಆನಂದ್ ಶರ್ಮಾ ಕಾಂಗ್ರೆಸ್ ಪರವಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ಸಂಸತ್ ಕಾಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆಗೆ ಆಗ್ರಹಿಸಿ ವಿಪಕ್ಷಗಳ ನಾಯಕರು ನಿಲುವಳಿ ಸೂಚನೆ ಮಂಡಿಸಿದ್ದಾರೆ. ದೇಶದ ಸುರಕ್ಷತೆ ವಿಷಯದಲ್ಲಿ ರಾಜಿ ಇಲ್ಲ, ಗೃಹಸಚಿವರು ಮಸರತ್ ಆಲಂ ಬಿಡುಗಡೆ ವಿಷಯದ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಮಸರತ್ ಆಲಂ ಬಿಡುಗಡೆ ವಿಚಾರ ಬಿಜೆಪಿ ಮತ್ತು ಪಿಡಿಪಿ ನಡುವೆ ತೀವ್ರ ತಿಕ್ಕಾಟ ಸೃಷ್ಟಿಸಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಮಿತ್ರ ಪಕ್ಷವನ್ನು ಸೌಜನ್ಯಕ್ಕೂ ವಿಚಾರಿಸಲಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.