ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಾ.12ರಂದು ಮಧ್ಯಾಹ್ನ 12:30ಕ್ಕೆ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೂ ಕೆಲವೇ ಗಂಟೆ ಮುನ್ನ ಜಿಡಿಪಿ ದರದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಕಳೆದ ವರ್ಷಕ್ಕಿಂತಲೂ ಈ ವರ್ಷದ ಜಿಡಿಪಿ ಭಾರಿ ಪ್ರಮಾಣದಲ್ಲಿ ಕುಸಿದಿದೆ.
ರೈತರ ಪರವಾಗಿರುವ ಸರ್ಕಾರ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೃಷಿ ವಲಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಜಿಡಿಪಿ ಕುಸಿತದ ಮೂಲಕ ಸ್ಪಷ್ಟವಾಗಿದೆ. ಕೃಷಿ ವಲಯದ ಜಿಡಿಪಿ ಪಾತಾಳಕ್ಕೆ ಇಳಿದಿದೆ. ಕಳೆದ ವರ್ಷ ಶೇ.9.4ರಷ್ಟಿದ್ದ ಜಿಡಿಪಿ ಈ ವರ್ಷ ಶೇ.4ಕ್ಕೆ ಕುಸಿದಿದೆ. ಕೈಗಾರಿಕೆ ಕ್ಷೇತ್ರದ ಜಿಡಿಪಿಯನ್ನು ಹೊರತುಪಡಿಸಿದರೆ ಬೇರೆ ಯಾವುದೇ ಕ್ಷೇತ್ರದ ಜಿಡಿಪಿಯಲ್ಲಿ ಭಾರಿ ಏರಿಕೆ ಕಂಡುಬಂದಿಲ್ಲ.
ಇನ್ನು ರಾಜ್ಯದ ಒಟ್ಟಾರೆ ಜಿಡಿಪಿ ಶೇ.7.2ರಿಂದ ಶೇ.7ಕ್ಕೆ ಕುಸಿದಿದೆ. ಇನ್ನು ಈ ಬಾರಿಯ ಬಜೆಟ್ ಗಾತ್ರ 1 ಲಕ್ಷ 68 ಸಾವಿರ ಕೋಟಿ ರೂಪಾಯಿ ಮೀರುವ ಸಾಧ್ಯತೆ ಇದೆ.
ಬಜೆಟ್ ಮಂಡನೆಗೆ ಕೆಲವೇ ಕ್ಷಣ ಬಾಕಿ ಇದ್ದು, ಸಿದ್ದರಾಮಯ್ಯ ಸರ್ಕಾರಕ್ಕೆ ಪ್ರತಿಭಟನೆ ಬಿಸಿ ತಟ್ಟಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಎರಡೂ ಜಿಲ್ಲೆಗಳ ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ.