ಬೆಂಗಳೂರು : ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಒದಗಿಸಲು ಅಗತ್ಯವಿರುವ ಕ್ರಿಯಾ ಯೋಜನೆ ರೂಪಿಸಲು ಮಾ.28ರಂದು ಆಯಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಜಿಲ್ಲಾಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾ.28ರಂದು ನಡೆಯಲಿರುವ ಸಭೆಯ ತೀರ್ಮಾನಗಳನ್ನು ಮಾ.30ರೊಳಗೆ ಸರ್ಕಾರಕ್ಕೆ ಕಳುಹಿಸಿಕೊಡಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.
ಕುಡಿಯುವ ನೀರಿನ ಯೋಜನೆಗಳಿಗಾಗಿ ಶಾಸಕರ ನೇತೃತ್ವದ ಕಾರ್ಯಪಡೆಗಳಿಗೆ ಈಗಾಗಲೇ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕಾದ್ದು, ಆಯಾ ಶಾಸಕರ ಜವಾಬ್ದಾರಿಯಾಗಿದೆ. ಇನ್ನೂ ಹೆಚ್ಚಿನ ಹಣದ ಅಗತ್ಯವಿದ್ದರೆ ಬಿಡುಗಡೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಮೊದಲ ಹಂತದಲ್ಲಿ ಒಂದು ಸಾವಿರ ನೀರು ಶುದ್ದೀಕರಣ ಘಟಕಗಳ ಅಳವಡಿಕೆಗೆ ಜನವಸತಿ ಗುರುತಿಸಿ ಮಾ.30ರೊಳಗೆ ಆಡಳಿತಾತ್ಮಕ ಅನುಮೋದನೆ ನೀಡಲು ಜಿಲ್ಲಾ ಪಂಚಾಯ್ತಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಕಾಂಗ್ರೆಸ್ನ ಕೆ.ಆರ್.ರಮೇಶ್ ಕುಮಾರ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಮಾ. 31ರೊಳಗೆ ಶುದ್ಧನೀರು ಘಟಕಗಳ ಅಳವಡಿಕೆ ಕಾರ್ಯಪೂರ್ಣಗೊಳಿಸಲು ಜಿಲ್ಲಾಪಂಚಾಯ್ತಿಗಳಿಗೆ ಸೂಚಿಸಲಾಗಿದೆ. ಹಾವೇರಿ, ಯಾದಗಿರಿ, ಬಾಗಲಕೋಟೆ ಜಿಲಲೆಗಳಲ್ಲಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಎರಡು ಸಾವಿರ ಶುದ್ಧೀಕರಣ ಘಟಕಗಳನ್ನು ಆರ್ಸೆನಿಕ್, ಅಧಿಕ ಪ್ಲೋರೈಡ್ ಯುಕ್ತ ಹಾಗೂ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ಹೊಂದಿರುವ ಜಲಮೂಲವಿರುವ ಜನವಸತಿಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ. ಒಂದು ನೂರು ಅಡಿಗಿಂತ ಹೆಚ್ಚು ಆಳವಿರುವ ಕೊಳವೆ ಬಾವಿಗಳಿರುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರತಿ ಘಟಕ ವೆಚ್ಚದಲ್ಲಿ ಶೇ.40-60ರಷ್ಟು ರಿಯಾಯ್ತಿ ನೀಡಲಾಗುವುದು. ಸಂಘ-ಸಂಸ್ಥೆಗಳು ನಿರ್ಮಿಸುವ ಶುದ್ಧನೀರು ಘಟಕಗಳಿಗೆ ಗರಿಷ್ಠ ಐದು ಲಕ್ಷ ರೂ. ಸಹಾಯಧನವನ್ನು ನೀಡಲಾಗುವುದು. ಉಳಿದ ಶೇ.50ರಷ್ಟು ವೆಚ್ಚವನ್ನು ಗ್ರಾಮ ಪಂಚಾಯ್ತಿ ಹಾಗೂ ಸಂಘ-ಸಂಸ್ಥೆಗಳು ಭರಿಸಬೇಕು. ಶುದ್ಧವಾದ ಪ್ರತಿ ಲೀಟರ್ ಗೆ 10ಪೈಸೆ ದರ ವಿಧಿಸಬೇಕು ಎಂದು ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ವಿವರಿಸಿದರು.