ನವದೆಹಲಿ : ಸೋನಿಯಾ ಗಾಂಧಿ ಅವರು ಬೆಳ್ಳಗಿರದಿದ್ದರೆ ಕಾಂಗ್ರೆಸ್ ಪಕ್ಷ ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿತ್ತೆ' ಎಂದು ಕೇಳುವ ಮೂಲಕ ಸೋನಿಯಾ ಗಾಂಧಿ ಬಗ್ಗೆ ವರ್ಣಭೇದ ಹೇಳಿಕೆ ನೀಡಿ ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳ ಖಾತೆ ರಾಜ್ಯ ಸಚಿವ ಗಿರಿರಾಜ್ ಸಿಂಗ್ ವಿವಾದಕ್ಕೆ ಸಿಲುಕಿದ್ದಾರೆ.
ಬಿಹಾರದ ಹಾಜಿಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು ನೈಜೀರಿಯಾ ಮಹಿಳೆಯನ್ನು ಮದುವೆಯಾಗಿದ್ದರೆ ಹಾಗೂ ಆಕೆಯ ಚರ್ಮ ಬೆಳ್ಳಗಿರದಿದ್ದರೆ ಕಾಂಗ್ರೆಸ್ ಪಕ್ಷ ಆ ಮಹಿಳೆಯ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿತ್ತೆ ಎಂದು ಪ್ರಶ್ನಿಸಿದ್ದರು.
ಇದೇ ವೇಳೆ ರಾಹುಲ್ ಗಾಂಧಿ ಅವರನ್ನು ನಾಪತ್ತೆಯಾದ ಮಲೇಷ್ಯಾ ವಿಮಾನದೊಂದಿಗೆ ಹೋಲಿಕೆ ಮಾಡಿದ್ದರು. "ಒಂದು ವೇಳೆ ಬಿಜೆಪಿ ಬದಲು ಕಾಂಗ್ರೆಸ್ ಅಧಿಕಾರಕ್ಕೆ ಬಂದು ರಾಹುಲ್ ಪ್ರಧಾನಿಯಾಗಿದ್ದರೆ, ಯಾವುದೋ ಕಾರಣಕ್ಕೆ ಪ್ರಧಾನಿ 47 ದಿನಗಳ ಕಾಲ ನಾಪತ್ತೆಯಾಗಿಬಿಡುತ್ತಿದ್ದರು. ರಾಹುಲ್ ಗಾಂಧಿ ಅವರು ರಜೆ ಮೇಲೆ ತೆರಳಿರುವುದು ಮಲೇಷ್ಯಾ ವಿಮಾನ ನಾಪತ್ತೆಯಾದಂತೆ. ಅದನ್ನು ಈವರೆಗೂ ಪತ್ತೆ ಹಚ್ಚಲು ಆಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಮಾತನಾಡಲೂ ಸಿದ್ಧವಿಲ್ಲ. ಇದು ದೇಶದಲ್ಲಿ ಜೋಕ್ ಆಗಿದೆ' ಎಂದು ವ್ಯಂಗ್ಯವಾಡಿದ್ದರು.
ಗಿರಿರಾಜ್ ಆಡಿರುವ ಮಾತು, ಅದರಲ್ಲೂ ವಿಶೇಷವಾಗಿ ಸೋನಿಯಾ ಅವರನ್ನುದ್ದೇಶಿಸಿ ಮಾಡಿರುವ ಜನಾಂಗೀಯ ಕುಹಕ ಭಾರಿ ವಿವಾದಕ್ಕೆ ಕಾರಣವಾಗಿದೆ. ಗಿರಿರಾಜ್ರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟದಿಂದ ಕಿತ್ತೂಗೆಯಬೇಕು ಹಾಗೂ ದೇಶದ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ವಿವಿಧ ರಾಜಕೀಯ ಪಕ್ಷಗಳ ಮಹಿಳಾ ನಾಯಕಿಯರೂ ಕೂಡ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಾ ಇಂಥ ಹೇಳಿಕೆ ನೀಡದಂತೆ ಗಿರಿರಾಜ್ ಅವರಿಗೆ ಸೂಚನೆ ನೀಡಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ವೈಯಕ್ತಿಕ ಟೀಕೆ ನಡೆಸಿ, ಪೇಚಿಗೆ ಸಿಕ್ಕಿಹಾಕಿಕೊಂಡಿತ್ತು. ಇದೇ ಪರಿಸ್ಥಿತಿಯನ್ನು ಪಕ್ಷಕ್ಕೂ ತರಬೇಡಿ ಎಂದು ಶಾ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಭಾರತದ ಸಚಿವರೊಬ್ಬರಿಂದ ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ. ಇದು ನಿಜಕ್ಕೂ ದುರದೃಷ್ಟಕರ ಎಂದು ಭಾರತದಲ್ಲಿನ ನೈಜೀರಿಯಾ ರಾಯಭಾರ ಕಚೇರಿ ಅಸಮಾಧಾನ ವ್ಯಕ್ತಪಡಿಸಿದೆ.