ನವದೆಹಲಿ : ಖ್ಯಾತ ವಿಜ್ಞಾನಿ ಡಾ|ಕೆ.ಕಸ್ತೂರಿರಂಗನ್ ವರದಿ ಅನ್ವಯ ಪಶ್ಚಿಮ ಘಟ್ಟಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳ ಗಡಿ ಗುರುತಿಸಿ ವರದಿ ಸಲ್ಲಿಸಲು ಪಶ್ಚಿಮ ಘಟ್ಟ ವ್ಯಾಪ್ತಿಯ ರಾಜ್ಯಗಳಿಗೆ ಕೇಂದ್ರ ಸರ್ಕಾರ ಏ.30ರ ಅಂತಿಮ ಗಡುವು ವಿಧಿಸಿದೆ.
ಒಂದು ವೇಳೆ ಈ ಅವಧಿಯಲ್ಲಿ ರಾಜ್ಯ ಸರ್ಕಾರಗಳು ಯಾವುದೇ ವರದಿಯನ್ನು ಸಲ್ಲಿಸದಿದ್ದರೆ, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವೇ ಪರಿಸರ ಸೂಕ್ಷ್ಮ ಪ್ರದೇಶಗಳ ಗಡಿ ಗುರುತಿಸಲಿದೆ. ತನ್ಮೂಲಕ ಆಯಾ ರಾಜ್ಯಗಳ ಪಶ್ಚಿಮಘಟ್ಟ ಶ್ರೇಣಿಯಲ್ಲಿ ಕೈಗೊಂಡಿರುವ ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ, ಮಾಲಿನ್ಯಕಾರಕ ಉದ್ದಿಮೆಗಳು ಹಾಗೂ ಬೃಹತ್ ವಸತಿ ಯೋಜನೆಗಳಿಗೆ ತೊಡಕಾಗಲಿದೆ ಎಂದು ಗೋವಾ ಮೂಲದ ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.
ಕಸ್ತೂರಿರಂಗನ್ ವರದಿ ಆಧರಿಸಿ ಈಗಾಗಲೇ ಕೇರಳ ಸರ್ಕಾರ ಪರಿಸರ ಸೂಕ್ಷ್ಮ ಪ್ರದೇಶಗಳ ಗಡಿ ಗುರುತಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ಉಳಿದ ಐದು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗೋವಾ ಹಾಗೂ ಗುಜರಾತ್ ರಾಜ್ಯಗಳು ಈವರೆಗೂ ಯಾವುದೇ ವರದಿಯನ್ನು ಕೊಟ್ಟಿಲ್ಲ. ಪಶ್ಚಿಮಘಟ್ಟಕ್ಕೆ ಸಂಬಂಧಿ ಸಿದ ಕಸ್ತೂರಿರಂಗನ್ ವರದಿಯನ್ನು ಈಗಾಗಲೇ ಒಪ್ಪಿಕೊಂಡಿರುವ ಕೇಂದ್ರ ಸರ್ಕಾರ, ಪರಿಸರ ಸೂಕ್ಷ್ಮ ಪ್ರದೇಶಗಳ ಬಗ್ಗೆ ಆದಷ್ಟು ಶೀಘ್ರ ಅಧಿಸೂಚನೆ ಹೊರಡಿಸುವ ವಿಚಾರವಾಗಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಒತ್ತಡಕ್ಕೆ ಸಿಲುಕಿದೆ.
ಪಶ್ಚಿಮಘಟ್ಟ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶಗಳ ಗಡಿ ಗುರುತಿಸುವಿಕೆ ಸಂಬಂಧ ಏ. 15ರೊಳಗೆ ರಾಜ್ಯ ಸರ್ಕಾರದ ಅಭಿಪ್ರಾಯ ಕುರಿತ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಈ ಹಿಂದೆಯೇ ಸೂಚನೆ ನೀಡಿತ್ತು. ಅದರಂತೆ ಪಶ್ಚಿಮ ಘಟ್ಟ ಪ್ರದೇಶದ ಜಿಲ್ಲೆಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಸಲ್ಲಿಸಲು ವರದಿ ಸಿದ್ಧಪಡಿಸಲಾಗುತ್ತಿದೆ. ಏಪ್ರಿಲ್ 15ರೊಳಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ತನ್ನ ಅಭಿಪ್ರಾಯ ತಿಳಿಸಲಿದೆ. ಏ. 30ರ ಹೊಸ ಗಡುವಿನ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ ಎಂದು ಅರಣ್ಯ ಇಲಾಖೆತಿಳಿಸಿದೆ.