ಬರ್ಲಿನ್ : ಭಾರತದ ಸಿಂಹ ಹಾಗೂ ಜರ್ಮನಿಯ ಗರುಡ ಜಗತ್ತಿನಲ್ಲಿ ಅತ್ಯುತ್ತಮ ಸಹಭಾಗಿಗಳಾಗಬಲ್ಲವು ಎಂದು ಹೇಳುವ ಮೂಲಕ ಭಾರತ ಹಾಗೂ ಜರ್ಮನಿ ಮುಂದಿನ ದಿನಗಳಲ್ಲಿ ವಿಶ್ವದಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬಲ್ಲವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಏ.14ರಂದು ಮೂರು ದಿನಗಳ ಜರ್ಮನ್ ಪ್ರವಾಸ ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಜರ್ಮನಿಯಿಂದ ಕೆನಡಾಗೆ ತೆರಳುವುದಕ್ಕೂ ಮುನ್ನ ಮಾತನಾಡಿ, ಸಿಂಹ ಹಾಗೂ ಗರುಡ ಉತ್ತಮ ಸಹಭಾಗಿಗಳಾಗಬಲ್ಲವು ಎಂದು ಹೇಳಿರುವ ಪ್ರಧಾನಿ ಮೋದಿ, ಜರ್ಮನಿಯಲ್ಲಿ ಭವ್ಯ ಸ್ವಾಗತ ನೀಡಿದ್ದಕ್ಕಾಗಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಮೇಕ್ ಇನ್ ಇಂಡಿಯಾ ಬಗ್ಗೆ ಮಾತನಾಡಿದಾಗಲೆಲ್ಲಾ, ಜರ್ಮನಿಯ ಸಹಕಾರದ ಬಗ್ಗೆ ಯೋಚಿಸುವುದು ಸ್ವಾಭಾವಿಕ, ಜರ್ಮನಿ ಕೌಶಲ್ಯ ಅಭಿವೃದ್ಧಿಗೆ ಪ್ರಸಿದ್ಧವಾದ ಪ್ರದೇಶವಾಗಿದ್ದು ಕೌಶಲ್ಯ ಅಭಿವೃದ್ಧಿ ನಮಗೂ ಆದ್ಯತೆಯ ವಿಷಯವಾಗಿದೆ. ಜರ್ಮನಿಯಿಂದ ಕಲಿಯಲು ಸಾಕಷ್ಟು ವಿಷಯಗಳಿದ್ದು ಭಾರತದಲ್ಲಿ ಬಂಡವಾಳ ಹೂಡಲು ಜರ್ಮನ್ ಕಂಪನಿಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಇದೇ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸ್ಥಾನದ ಬಗ್ಗೆ ಮಾತನಾಡಿರುವ ಮೋದಿ ಜರ್ಮನಿ ಹಾಗೂ ಭಾರತ ಎರಡೂ ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನ ಪಡೆಯಬೇಕೆಂದು ಹೇಳಿದ್ದಾರೆ.
ಜರ್ಮನಿಯ ಪ್ರವಾಸ ಅಂತ್ಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಜರ್ಮನಿಯೊಂದಿಗೆ ವಿಶೇಷ ಒಡನಾಟ ಹೊಂದಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್.ಸಿ.ವಿ ರಾಮನ್ ಅವರ ಹಸ್ತಪ್ರತಿಗಳನ್ನು ಏಂಜೆಲಾ ಮಾರ್ಕೆಲ್ ಅವರಿಗೆ ನೀಡಿದ್ದಾರೆ. ಸರ್ ಸಿ.ವಿ ರಾಮನ್ ಅವರು ಜರ್ಮನಿಯ ವಿಜ್ನಾನಿ ವಾನ್ ಹೆಲ್ಮೋಟ್ಜ್ ಅವರಿಂದ ಪ್ರಭಾವಿತಗೊಂಡಿದ್ದರು.