ನವದೆಹಲಿ : 'ಬಿಹಾರ'ದಲ್ಲಿ ಬಿಜೆಪಿ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ, ಇತ್ತ ಜನತಾ ಪರಿವಾರದ ವಿಲೀನ ಪ್ರಕ್ರಿಯೆಯೂ ಚುರುಕುಗೊಂಡಿದೆ.
ಆರು ಪಕ್ಷಗಳು ವಿಲೀನಗೊಳ್ಳಲಿರುವ ಹಳೆ ಜನತಾಪರಿವಾರಕ್ಕೆ ಸಮಾಜವಾದಿ ಜನತಾಪಕ್ಷ ಎಂದು ನಾಮಕರಣವಾಗಲಿದ್ದು, ಹೊಸರೂಪ ಪಡೆದಿರುವ ಜನತಾಪಕ್ಷಕ್ಕೆ ಮುಲಾಯಂ ಸಿಂಗ್ ಯಾದವ್ ಅವರು ಅಧ್ಯಕ್ಷರಾಗಲಿದ್ದಾರೆ. ಸಮಾಜವಾದಿ ಜನತಾ ಪಕ್ಷಕ್ಕೆ ಸೈಕಲ್ ನ್ನು ಚಿಹ್ನೆಯಾಗಿ ಆಯ್ಕೆ ಮಾಡಲಾಗಿದೆ.
ಜನತಾ ಪರಿವಾರದೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಲು ಹಳೆ ಜನತಾಪರಿವಾರದಲ್ಲಿದ್ದ ಆರು ಪಕ್ಷಗಳ ಮುಖಂಡರು ಏ.15ರಂದು ನವದೆಹಲಿಯಲ್ಲಿ ಸಭೆ ನಡೆಸಿ ಈ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ವರ್ಷಾಂತ್ಯದ ವೇಳೆಗೆ ಬಿಹಾರದಲ್ಲಿ ಹಾಗೂ 2017ರಲ್ಲಿ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜನತಾಪರಿವಾರ ಒಗ್ಗೂಡಿರುವುದು ಮಹತ್ವ ಪಡೆದಿದೆ.
ಸಭೆಯಲ್ಲಿ ಬಿಹಾರ ಸಿ.ಎಂ ನಿತೀಶ್ ಕುಮಾರ್, ಶರದ್ ಯಾದವ್, ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ ತ್ಯಾಗಿ, ಜೆಡಿಎಸ್ ನಾಯಕ ಹೆಚ್.ಡಿ ದೇವೇಗೌಡ, ರಾಷ್ಟ್ರೀಯ ಜನತಾದಳದ ಮುಖಂಡ ಲಾಲೂ ಪ್ರಸಾದ್ ಯಾದವ್, ಓಂ ಪ್ರಕಾಶ್ ಚೌಟಾಲ ನೇತೃತ್ವದ ಐ.ಎನ್.ಎಲ್.ಡಿ ಸೇರಿದಂತೆ ಹಳೆ ಜನತಾಪರಿವಾರದ ನಾಯಕರು ಭಾಗವಹಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸುವ ನಿಟ್ಟಿನಲ್ಲಿ ಹಳೆ ಜನತಾಪರಿವಾರದ ನಾಯಕರು ಒಗ್ಗೂಡಿದ್ದಾರೆ.