ಶ್ರೀನಗರ : ಪಾಕ್ ಧ್ವಜ ಹಾರಿಸಿದ್ರೆ ತಪ್ಪೇನು: ಮಸರತ್ ಆಲಂ ಉದ್ಧಟತನ
ಪಾಕಿಸ್ತಾನ ಧ್ವಜ ಹಾರಿಸಿದ್ದರಲ್ಲಿ ತಪ್ಪೇನು ಇಲ್ಲ. ಬೇಕಿದ್ದರೆ ರಾಜ್ಯ ಸರ್ಕಾರ ನಮ್ಮನ್ನು ಬಂಧಿಸಲಿ ಎಂದು ಭಾರತ ವಿರೋಧಿ ಪ್ರತಿಭಟನೆಯ ರೂವಾರಿ, ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಉದ್ಧಟತನದ ಹೇಳಿಕೆ ನೀಡಿದ್ದಾನೆ.
ಪ್ರತ್ಯೇಕತಾವಾದಿ ನಾಯಕ ಸೈಯದ್ ಶಾ ಗಿಲಾನಿ ಐದು ವರ್ಷಗಳ ಬಳಿಕ ಶ್ರೀನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರ್ಯಾಲಿ ವೇಳೆ ಹಲವು ದೇಶದ್ರೋಹಿಗಳು ಪಾಕಿಸ್ತಾನದ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ, ಭಾರತದ ವಿರುದ್ಧ ಘೋಷಣೆ ಕೂಗಿದ್ದರು.
ಈ ಗುಂಪಿನ ನೇತೃತ್ವವನ್ನು ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಮಸರತ್ ಆಲಂ ವಹಿಸಿದ್ದ. ಈ ಭಾರತ ವಿರೋಧಿ ಕೃತ್ಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಭಾರತ ವಿರೋಧಿ ರ್ಯಾಲಿ ಆಯೋಜಿಸಿದ್ದ ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಶಾ ಗಿಲಾನಿ, ಮಸರತ್ ಆಲಂ ಹಾಗೂ ಬಶೀರ್ ಅಹ್ಮದ್ ಭಟ್ ಅಲಿಯಾಸ್ ಪೀರ್ ಸೈಫುಲ್ಲಾ ವಿರುದ್ಧ ಬಡ್ಗಾಮ್ ಪೊಲೀಸರು ಪ್ರಚೋದನಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಆರೋಪದಡಿಯಲ್ಲಿ ಯುಎಪಿಎ ಕಾಯ್ದೆಯ ಸೆಕ್ಷನ್ 120 ಬಿ, 147, 341, 336, 427 ಪ್ರಕಾರ ಕೇಸ್ ದಾಖಲಿಸಿದ್ದಾರೆ. ಪ್ರತ್ಯೇಕತಾವಾದಿಗಳ ವಿರುದ್ಧ ಕೇಸ್ ಮಾತ್ರ ದಾಖಲಾಗಿದ್ದು, ಈವರೆಗೂ ಅವರನ್ನು ಬಂಧಿಸಿಲ್ಲ.