ನವದೆಹಲಿ : 'ಅಫ್ಘಾನಿಸ್ಥಾನ' ಅಧ್ಯಕ್ಷ ಅಶ್ರಫ್ ಘನಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದಾರೆ.
ಮೋದಿ ಅವರೊಂದಿಗೆ ಅಪ್ಘಾನಿಸ್ಥಾನ ಅಧ್ಯಕ್ಷರು ಮಹತ್ವದ ಮಾತುಕತೆ ನಡೆಸಿದ್ದಾರೆ. ಬಳಿಕ ಜಂಟಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಪ್ಘಾನಿಸ್ಥಾನ ನಿರಂತರವಾಗಿ ಎದುರಿಸುತ್ತಿರುವ ಭಯೋತ್ಪಾದನೆ ಹಾಗೂ ತೀವ್ರಗಾಮಿಗಳ ವಿರುದ್ಧದ ಹೋರಾಟ ನಡೆಸಲು ಭಾರತ ಸಹಾಯ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.
ಭಯೋತ್ಪಾದನೆ ಅಭಿವೃದ್ಧಿ ಹಾಗೂ ಮಾನವೀಯತೆಗೆ ಮಾರಕವಾಗಿದೆ. ಭಯೋತ್ಪಾದನೆಯನ್ನು ಹತ್ತಿಕ್ಕಿ, ಅಪ್ಘಾನಿಸ್ಥಾನದ ಸಂವಿಧಾನದ ಚೌಕಟ್ಟಿನಲ್ಲೇ ಅಲ್ಲಿನ ಅಭಿವೃದ್ಧಿಗೆ ಸಹಕರಿಸುವುದಾಗಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಅಪ್ಘಾನಿಸ್ಥಾನ ಹಾಗೂ ಭಾರತದ ನಡುವಿನ ಸಂಬಂಧ ಕೇವಲ ಎರಡು ರಾಷ್ಟ್ರಗಳದ್ದಲ್ಲ ಬದಲಾಗಿ, ಮಾನವೀಯ ಮೌಲ್ಯಗಳನ್ನು ಹೊಂದಿರುವಂತಹದ್ದು ಎಂದಿರುವ ಪ್ರಧಾನಿ, ಅಪ್ಘಾನಿಸ್ಥಾನದ ಭದ್ರತಾ ಪಡೆಗಳಿಗೂ ಭಾರತ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅಪ್ಘಾನಿಸ್ಥಾನ ಅಧ್ಯಕ್ಷ ಅಶ್ರಫ್ ಘನಿ, ಭಯೋಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ನಾಮಗೊಳಿಸಲು ನಾವು ಸಿದ್ಧರಿದ್ದೇವೆ, ಭಯೋತ್ಪಾದನೆಯನ್ನು ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂದು ವಿಂಗಡಿಸಲು ಸಾಧ್ಯವಿಲ್ಲ. ಉಗ್ರವಾದದ ಕರಿ ನೆರಳು ನಮ್ಮ ಮಕ್ಕಳು ಮಹಿಳೆಯರನ್ನು ಕಾಡುತ್ತಿದೆ. ಮಾನವಿಯತೆಗೆ ಮಾರಕವಾಗಿರುವ ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ಕರೆ ನೀಡಿದ್ದಾರೆ.