ನವದೆಹಲಿ : ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಬಿಜೆಪಿ ಸಿದ್ಧಾಂತವಾದಿ ಯಾಗಿದ್ದ ಮಾಜಿ ಸಚಿವ ಅರುಣ್ ಶೌರಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
10 ಲಕ್ಷ ರೂ. ಸೂಟು ಬೂಟುಗಳನ್ನು ಧರಿಸಿ ಗಾಂಧೀಜಿ ಅವರ ಸರಳತೆಯ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ. ಇದು ಅವರ ವ್ಯಕ್ತಿತ್ವಕ್ಕೆ ಶೋಭಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ದೇಶದ ಆರ್ಥಿಕತೆಯನ್ನು ಕಳಪೆಯಾಗಿ ನಿಭಾಯಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಮೇಲೆ ಮತ್ತು ಅವರ ಧಾರ್ಮಿಕ ಸ್ಥಳಗಳ ಮೇಲೆ ಬಲಪಂಥೀಯ ಸಂಘಟನೆಗಳು ನಡೆಸುತ್ತಿರುವ ದಾಳಿಗಳಿಗೆ ಮೋದಿ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹೆಡ್ ಲೈನ್ಸ್ ಟುಡೇಗೆ ಸಂದರ್ಶನ ನೀಡಿರುವ ಅವರು, ಮೋದಿ, ಅಮಿತ್ ಶಾ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಈ ತ್ರಿಮೂರ್ತಿಗಳು ಬಿಜೆಪಿಯನ್ನು ಮುನ್ನಡೆಸುತ್ತಿದ್ದಾರೆ. ಬಿಜೆಪಿಯ ಇತರ ಸದಸ್ಯರು ನಗಣ್ಯರಾಗಿದ್ದಾರೆ. ಮೋದಿ ಸರ್ಕಾರ ಶೇ.8ರ ಆರ್ಥಿಕ ಅಭಿವೃದ್ಧಿ ದರವನ್ನು ಸಾಧಿಸಿದೆ ಎಂದು ಜಂಭಕೊಚ್ಚಿಕೊಳ್ಳುವುದು ಕೇವಲ ಅತಿಶಯೋಕ್ತಿಗೆ ಸೀಮಿತ. ಪತ್ರಿಕೆಯ ಶೀರ್ಷಿಕೆಯಲ್ಲಿ ಸ್ಥಾನ ಪಡೆದುಕೊಳ್ಳಲು ಇದನ್ನೆಲ್ಲಾ ಮಾಡಲಾಗುತ್ತಿದೆ. ಆದರೆ, ಅದು ವಾಸ್ತವವಲ್ಲ ಎಂದು ಹೇಳಿದ್ದಾರೆ.