ಮುಂಬೈ : 'ಕಿಸಾನ್ ಪಾದಯಾತ್ರೆ' ಹಮ್ಮಿಕೊಂಡಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ.
ಅಧಿಕಾರ ಕಳೆದುಕೊಂಡ ನಂತರ ರೈತರ ಪರ ಪಾದಯಾತ್ರೆ ನಡೆಸುವ ಬದಲು ಅಧಿಕಾರದಲ್ಲಿರಬೇಕಾದರೆ, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕಿತ್ತು ಎಂದು ರಾಹುಲ್ ಗಾಂಧಿಗೆ ಶಿವಸೇನೆ ಹೇಳಿದೆ.
ಇದೇ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮಹಾರಾಷ್ಟ್ರ ದಿನಾಚರಣೆಯ ಸಂದೇಶದ ಬಗ್ಗೆಯೂ ಕಿಡಿಕಾರಿರುವ ಬಿಜೆಪಿ ಮಿತ್ರ ಪಕ್ಷ ಕೇವಲ ರೈತರ ಆತ್ಮಹತ್ಯೆ ಬಗ್ಗೆ ಮಾತನಾಡಿದರೆ ಅವರ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಈ ಹಿಂದೆ ಇದ್ದದ್ದು, ರಾಹುಲ್ ಗಾಂಧಿ ಮುನ್ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಸರ್ಕಾರ, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ರೈತರಿಗೆ ಬಿಡುಗಡೆ ಮಾಡಿದ್ದ ಹಣ ಎಲ್ಲಿ ಹೋಯಿತು ಎಂದು ಶಿವಸೇನೆ ಪ್ರಶ್ನಿಸಿದೆ.
ತಮ್ಮ ಸರ್ಕಾರವಿದ್ದಾಗ ರೈತರ ಸಮಸ್ಯೆಗಳನ್ನು ಬಗೆಹರಿಸಲಾಗಲಿಲ್ಲ ಎಂಬುದನ್ನು ಮರೆತಿರುವ ರಾಹುಲ್ ಗಾಂಧಿ, ಈಗ ಪಾದಯಾತ್ರೆ ಹೆಸರಿನಲ್ಲಿ ರೈತರೊಂದಿಗೆ ಸ್ನ್ಯಾಕ್ಸ್ ಹಾಗೂ ಚಹಾ ಕುಡಿಯುತ್ತಾ ಕಾಲಹರಣ ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಶಿವಸೇನೆ ಹೇಳಿದೆ.