ಮಥುರಾ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಮಥುರಾದಲ್ಲಿ ಬಿಜೆಪಿ ಬೃಹತ್ ಸಾಧನಾ ಸಮೇಶ ಹಮ್ಮಿಕೊಂಡಿದೆ. ಮಥುರಾ ಜಿಲ್ಲೆಯಲ್ಲಿರುವ ನಾಗ್ಲಾ ಚಂದ್ರಭಾನ್ ನಲ್ಲಿ ಆರಂಭವಾದ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಈ ಮೂಲಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೇರಿ ಒಂದು ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ಆಯೋಜಿಸಲು ಉದ್ದೇಶಿಸಿರುವ 200 ರ್ಯಾಲಿ, 200 ಸುದ್ದಿಗೋಷ್ಠಿ, 5000 ಸಾರ್ವಜನಿಕ ಸಭೆ, 500 ಪ್ರದರ್ಶನ ಮೇಳಗಳಿಗೆ ಅಧಿಕೃತ ಚಾಲನೆ ದೊರೆತಂತಾಗಿದೆ.
ಸಮಾವೇಶಕ್ಕೆ ಚಾಲನೆ ನೀಡುವ ಮೊದಲು ಪ್ರಧಾನಿ ಮೋದಿ, ಬಿಜೆಪಿಯ ಪೂರ್ವಾಶ್ರಮವಾದ ಜನಸಂಘದ ಸಂಸ್ಥಾಪಕ ದೀನ್ ದಯಾಳ್ ಧಾಮಕ್ಕೆ ಭೇಟಿ ನೀಡಿದರು. ಬಳಿಕ ಮಥುರಾದಲ್ಲಿರುವ ಸ್ಮೃತಿ ಭವನದಲ್ಲಿ ಪ್ರಧಾನಿ ಮೋದಿಯವರಿಗೆ ಭವ್ಯ ಸ್ವಾಗತ ಕೋರಲಾಯಿತು.
ಕಾರ್ಯಕ್ರಮದ ವೇಳೆ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನಲ್ಲಿ ಹಲವು ಹೊಸ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸುವ ಸಾಧ್ಯತೆ ಇದೆ.
ಸರ್ಕಾರದ ಮೊದಲ ವರ್ಷಾಚರಣೆಗೆ ಬಿಜೆಪಿ ಈಗಾಗಲೇ 'ವರ್ಷ್ ಏಕ್, ಕಾಮ್ ಅನೇಕ್' (ವರ್ಷ ಒಂದು, ಕೆಲಸ ಹಲವು) ಮತ್ತು 'ಮೋದಿ ಸರ್ಕಾರ್, ಕಾಮ್ ಲಗಾತಾರ್' (ಮೋದಿ ಸರ್ಕಾರ, ಕಾರ್ಯ ನಿರಂತರ) ಎಂಬ ಘೋಷವಾಕ್ಯಗಳನ್ನು ಸಿದ್ಧಪಡಿಸಿದೆ.
ಮೇ 25ರಿಂದ ಮೇ 31ರವರೆಗೆ ಬಿಜೆಪಿ "ಜನ ಕಲ್ಯಾಣ ಪರ್ವ'ವನ್ನು ಆಯೋಜಿಸಿದೆ. ಈ ವೇಳೆ 200 ರ್ಯಾಲಿ, 200 ಪತ್ರಿಕಾಗೋಷ್ಠಿ, 5000 ಸಾರ್ವಜನಿಕ ಸಭೆ ಹಾಗೂ ಸರ್ಕಾರದ ಸಾಧನೆ ಅನಾವರಣಗೊಳಿಸುವ 500 ಪ್ರದರ್ಶನ ಮೇಳಗಳನ್ನು ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿಗಳು, ಶಾಸಕರು ಹಾಗೂ ಪದಾಧಿಕಾರಿಗಳ ಮೂಲಕ ನಡೆಸಲು ನಿರ್ಧರಿಸಿದೆ.