ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್.ಡಿ.ಎ ಸರ್ಕಾರಕ್ಕೆ ಒಂದು ವರ್ಷ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಿದ್ದಾರೆ. ಕಾಂಗ್ರೆಸ್ ಗೆ ಕಪ್ಪು ಹಣದ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
10 ವರ್ಷಗಳ ತನ್ನ ಆಡಳಿತ್ರದಲ್ಲಿ ಕಪ್ಪು ಹಣ ವಾಪಸ್ ಗೆ ಕಾಂಗ್ರೆಸ್ ಕೈಗೊಂಡ ಕ್ರಮಗಳೇನು? ಎಂದು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಕಪ್ಪು ಹಣದ ತನಿಖೆಗೆ ಆಯೋಗ ರಚಿಸಿದ್ದು ನರೇಂದ್ರ ಮೋದಿ ಸರ್ಕಾರ. ಮೊದಲ ಸಂಪುಟ ಸಭೆಯಲ್ಲಿಯೇ ಆಯೋಗ ರಚಿಸಲಾಗಿತ್ತು. ಕಪ್ಪು ಹಣ ತಡೆಗೆ ಕಾಯ್ದೆಯನ್ನೂ ಮಾಡಲಾಗಿದೆ ಎಂದು ಹೇಳಿದರು.
ಪಾರದರ್ಶಕ ರೀತಿಯಲ್ಲಿ ಗಣಿಗಳನ್ನು ಹರಾಜು ಹಾಕಲಾಗಿದೆ. ಬಡತನ ನಿರ್ಮೂಲನೆಗೆ ಕಾರ್ಯಕ್ರಮಗಳು ಜಾರಿಯಾಗಿವೆ, ಹಣದುಬ್ಬರ ಕಡಿಮೆಯಾಗಿದೆ, ಭ್ರಷ್ಟಾಚರಕ್ಕೆ ಬ್ರೇಕ್ ಬಿದ್ದಿದೆ. ಚಿಕ್ಕ ಚಿಕ್ಕ ಉದ್ದಿಮೆಗಳು ಬೆಳೆಯಲು ಸಹಾಯ ಮಾಡಿದ್ದೇವೆ ಎಂದು ಸರ್ಕಾರದ ಸಾಧನೆಯನ್ನು ಪಟ್ಟಿಮಾಡಿದರು.
ಸ್ವಚ್ಛ ಭಾರತ ಅಭಿಯಾನ, ಬೇಟಿ ಬಚಾವೋ, ಬೇಟಿ ಪಡಾವೋ, ಜನಧನ್ ಯೋಜನೆಗಳಂತಹ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಸಾರಿಗೆ ವ್ಯವಸ್ಥೆಯಲ್ಲಿಯೂ ಸುಧಾರಣೆ ತಂದಿದ್ದೇವೆ. ಚುನಾವಣೆಯ ವೇಳೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. ಎನ್.ಡಿ.ಎ ಸರ್ಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧವನ್ನು ಉತ್ತಮಗೊಳಿಸಿದೆ ಎಂದು ವಿವರಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ಸಾಧನೆಗಳ ಕಿರುಹೊತ್ತಿಗೆಯ ಬಿಡುಗಡೆ ಮಾಡಿದರು.