ನವದೆಹಲಿ : ನನ್ನ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಒಂದು ವರ್ಷದಲ್ಲಿ ದೇಶ ಆರ್ಥಿಕ ಪುನಶ್ಚೇತನ ಕಂಡಿದೆ ಮತ್ತು ಸರ್ಕಾರ ಜನರ ನಂಬಿಕೆ ಉಳಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎನ್.ಡಿ.ಎ ಸರ್ಕಾರಕ್ಕೆ ಇಂದಿಗೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ದೇಶದ ಜನತೆಗೆ ಬಹಿರಂಗ ಪತ್ರ ಬರೆದಿರುವ ಮೋದಿ, ಭ್ರಷ್ಟಾಚಾರಮುಕ್ತ ಸರ್ಕಾರದ ನಮ್ಮ ಘೋಷಣೆ ಪೂರೈಸುವ ಮೂಲಕ ಜನರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ದೇಶದ ಅರ್ಥ ವ್ಯವಸ್ಥೆಗೆ ನವಚೈತನ್ಯ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಭ್ರಷ್ಟಾಚಾರರಹಿತ ಸರ್ಕಾರ, ಪಾರದರ್ಶಕ ಆಡಳಿತ, ಅಭಿವೃದ್ಧಿಯ ಪಥದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವ ಹಾಗೂ ಟೀಮ್ ಇಂಡಿಯ ರೀತಿಯ ಸ್ಫೂರ್ತಿ ಯನ್ನು ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ದೇಶದ ಗೌರವ ರಕ್ಷಣೆ, ಬಡವರ ಉದ್ಧಾರಕ್ಕೆ ನನ್ನ ದೇಹದ ಒಂದೊಂದು ಹನಿ ರಕ್ತ ಮತ್ತು ನನ್ನೆಲ್ಲ ಸ್ಫೂರ್ತಿಯನ್ನು ನಾನು ಪ್ರಾಮಾಣಿಕವಾಗಿ ವ್ಯಯಿಸುತ್ತೇನೆ. ನಾನು ಈ ದೇಶದ ಜನತೆಯ ಪ್ರಧಾನ ಸೇವಕನಾಗಿ ನನ್ನ ಬದುಕು ಈ ದೇಶಕ್ಕಾಗಿ ಮೀಸಲು ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.
ನಾನು ಅಧಿಕಾರ ವಹಿಸಿಕೊಂಡ ಸಂದರ್ಭ ದೇಶದಲ್ಲಿ ಭ್ರಷ್ಟಾಚಾರ ತುಂಬಿತ್ತು. ಜನರಿಗೆ ಸರ್ಕಾರದ ಬಗೆಗಿನ ವಿಶ್ವಾಸವೇ ಹೊರಟುಹೋಗಿತ್ತು. ಜನರು ಅಸಹಾಯಕರಾಗಿದ್ದರು. ಆಗ ತುರ್ತು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿತ್ತು. ನಾವು ಅದನ್ನು ಮಾಡಿದೆವು ಎಂದು ಅವರು ಹೇಳಿದ್ದಾರೆ.
ರಾಜಕಾರಣಿಗಳು ಮತ್ತು ಅಧಿಕಾರಿಗಳ ಕಾರ್ಯ ವೈಖರಿಯಲ್ಲಿ ಬದಲಾವಣೆ ತರಲಾಗಿದೆ. ಆಡಳಿತ ಯಂತ್ರವನ್ನು ಚುರುಕುಗೊಳಿಸಲಾಗಿದೆ. ಎಲ್ಲರಲ್ಲೂ ಟೀಮ್ ಇಂಡಿಯಾ ಸ್ಪಿರಿಟ್ ತುಂಬಲಾಗಿದೆ. ಈ ಎಲ್ಲ ಬದಲಾವಣೆಗಳ ಮೂಲಕ ಸರ್ಕಾರದಲ್ಲಿನ ಜನರ ವಿಶ್ವಾಸವನ್ನು ಪುನರ್ ಸ್ಥಾಪಿಸಿದ್ದೇವೆ.
ಬಡವರಿಗೆ ನ್ಯಾಯವಾಗಿ ದೊರೆಯಬೇಕಾದ ಸಬ್ಸಿಡಿ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡುವ ಮಹತ್ವದ ಕಾರ್ಯ ಜಾರಿಗೆ ಬಂದಿದೆ. ಸ್ವಚ್ಛ ಭಾರತ, ಗಂಗಾ ಶುದ್ಧೀಕರಣದಂಥ ಕಾರ್ಯಕ್ರಮಗಳು ಜಾರಿಯಲ್ಲಿವೆ. ಇದು ಆರಂಭವಷ್ಟೇ. ಇನ್ನು ಮುಂದೆ ಜನತೆಯ ಜೀವನಮಟ್ಟ ಸುಧಾರಣೆಗೆ ಅಗತ್ಯಕ್ರಮ ಕೈಗೊಂಡು ಸುಧಾರಣೆ ತರಬೇಕಾಗಿದೆ. ಇದಕ್ಕೆಲ್ಲ ದೇಶದ ಜನತೆಯ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.