ನವದೆಹಲಿ : ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಯಾವುದೇ ಭಾಗದಲ್ಲಿ ಪಾಕಿಸ್ತಾನೀ ಧ್ವಜವನ್ನು ಹಾರಿಸಲು ಬಿಡುವುದಿಲ್ಲ, ಅಂಥ ಕೃತ್ಯ ಎಸಗಿದವರ ಬಗ್ಗೆ ಯಾವುದೇ ದಾಕ್ಷಿಣ್ಯ ತೋರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದು ಒಂದು ವರ್ಷವಾದ ಹಿನ್ನಲೆಯಲ್ಲಿ ಮಾಧ್ಯಮ ವರದಿಗಾರರನ್ನು ಉದ್ದೇಶಿಸಿ ಮಾತನಾಡುತ್ತ ಗೃಹ ಸಚಿವರು, ಅಂತಹ ಕೃತ್ಯದಲ್ಲಿ ಯಾರೇ ತೊಡಗಿರಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
'ಇಂಥ (ಪಾಕಿಸ್ತಾನಿ ಧ್ವಜ ಹಾರಿಸುವ ಘಟನೆಗಳು)ವುಗಳು ಈ ಹಿಂದೆಯೂ (ಈ ಹಿಂದಿನ ಸರಕಾರಗಳ ಅವಧಿಯಲ್ಲೂ) ಸಂಭವಿಸಿವೆ. ಆದರೆ ಇನ್ನು ಅವುಗಳನ್ನು ಸಹಿಸಲಾಗುವುದಿಲ್ಲ' ಎಂದು ಸಿಂಗ್ ಹೇಳಿದರು.
ಭೂಗತ ದೊರೆ ದಾವೂದ್ ಇಬ್ರಾಹಿಂ ನನ್ನು ಪಾಕಿಸ್ತಾನದಿಂದ ಭಾರತಕ್ಕೆ ಕರೆತರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಸಚಿವ ರಾಜನಾಥ್, 'ಇಂಟರ್ ಪೋಲ್ ಈ ವಿಚಾರವಾಗಿ ದಾವೂದ್ ಹಾಗೂ ಇತರ ಅನೇಕರ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜ್ಯಾರಿ ಮಾಡಿದ್ದು, ಭಾರತ ವಿರೋಧಿ ಕೃತ್ಯದಲ್ಲಿ ತೊಡಗಿರುವವರನ್ನು ಹಿಡಿಯುವ ಪ್ರಕ್ರಿಯೆ ನಡೆಯುತ್ತಿದೆ' ಎಂದರು.
'ದಾವೂದ್ ಇರಲಿ, ಮಾಸೂದ್ ಅಝ್ಹರ್ ಅಥವಾ ಝಕಿರ್ ರೆಹ್ಮಾನ್ ಲಖ್ವಿ ಇರಲಿ, ಅವರೆಲ್ಲರ ವಿರುದ್ಧ ರೆಡ್ ಕಾರ್ನರ್ ನೊಟೀಸ್ ಜ್ಯಾರಿ ಮಾಡಲಾಗಿದೆ. ಅವರನ್ನು ಹಿಡಿದು ಶಿಕ್ಷಿಸುವ ಕಾರ್ಯದಲ್ಲಿ ಭಾರತ ಅತ್ಯುತ್ತಮೆ ಪ್ರಯತ್ನಗಳನ್ನು ಮಾಡುತ್ತಿದೆ' ಎಂದು ಸಿಂಗ್ ಹೇಳಿದರು.
ಈ ಅಪರಾಧಿಗಳ ಬಗ್ಗೆ ಸಮಗ್ರ ಮಾಹಿತಿ ಕಡತ (ಡೋಸಿಯೆರ್)ಯನ್ನು ಇನ್ನೊಮ್ಮೆ ಪಾಕಿಸ್ತಾನಕ್ಕೆ ಕೊಡಲಾಗುತ್ತದೆಯೆ ಎಂದು ಕೇಳಿದ ಪ್ರಶ್ನೆಗೆ ಸಿಂಗ್ಮ್ ಉತ್ತರಿಸಿ, ಅಂಥ ಪ್ರಸ್ತಾವನೆ ಸಧ್ಯಕ್ಕೆ ಸರಕಾರದ ಮುಂದಿಲ್ಲ. ಆದರೆ, 2012ರಲ್ಲೇ ಅದನ್ನು ಪಾಕಿಸ್ತಾನಕ್ಕೆ ನೀಡಲಾಗಿತ್ತು ಎಂದರು.