ಮುಂಬೈ : ಜಮ್ಮು-ಕಾಶ್ಮೀರ ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎನ್.ಡಿ.ಎ ಮಿತ್ರಪಕ್ಷ ಶಿವಸೇನೆ, ಅವರಿಗೆ ತಕ್ಕ ಪಾಠ ಕಲಿಸಲು ಭಾರತವೂ ಕದನ ವಿರಾಮ ಉಲ್ಲಂಘಿಸಿ ಆ ದೇಶದೊಳಕ್ಕೆ ಪ್ರವೇಶಿಸಬೇಕು ಎಂದು ಹೇಳಿದೆ.
2013ರಲ್ಲಿ ಪಾಕ್ ಸೈನಿಕರು ಗಡಿಯಲ್ಲಿ 347 ಬಾರಿ ನಿಯಮ ಉಲ್ಲಂಘಿಸಿದ್ದಾರೆ.
2014ರಲ್ಲಿ ಅದರ ಸಂಖ್ಯೆ 562ಕ್ಕೆ ಏರಿತ್ತು. ಅವರ ಈ ಅಪ್ರಚೋದಿತ ದಾಳಿಗಳಿಂದಾಗಿ ಗಡಿ ನಿಯಂತ್ರಣ ರೇಖೆಯ ಬಳಿ ಇರುವ ನೂರಾರು ಗ್ರಾಮಗಳ ಸುಮಾರು 32 ಸಾವಿರ ಜನ ಊರುಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ಭಾರತೀಯ ಗಡಿಭದ್ರತಾ ಪಡೆ ಯೋಧರು ಪಾಕ್ ಸೈನಿಕರ ದಾಳಿಗೆ ಪ್ರತಿ ದಾಳಿ ಮಾಡಿದಾಗ ಮಾತ್ರವೇ ಅವರು ಹಿಂದೆ ಸರಿಯುತ್ತಾರೆ. ಪಾಕಿಸ್ಥಾನದಂತಹ ಸಣ್ಣ ದೇಶವೇ ಕದನ ವಿರಾಮ ಉಲ್ಲಂಘಿಸುವ ಧೈರ್ಯ ಮಾಡುವುದಾದರೆ ಭಾರತದಂತಹ ಬೃಹತ್ ರಾಷ್ಟ್ರವೂ ಹಾಗೆಯೇ ಮಾಡಬಾರದೇಕೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಪ್ರಶ್ನಿಸಿದೆ.
ಪಾಕಿಸ್ತಾನದಲ್ಲಿ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಅದು ಅಮೆರಿಕದ ನೆರವನ್ನೇ ನಂಬಿಕೊಂಡಿದೆ ಎಂದು ಶಿವಸೇನೆ ಹರಿಹಾಯ್ದಿದೆ. ಈ ವಾರದಲ್ಲಿ 2 ಬಾರಿ ಪಾಕಿಸ್ಥಾನ ಸೈನಿಕರು ಕದನವಿರಾಮ ಉಲ್ಲಂಘಿಸಿದ್ದು, ಭಾರತೀಯ ಯೋಧನೊಬ್ಬ ಗಾಯಗೊಂಡಿದ್ದ.