ಢಾಕಾ : ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಐತಿಹಾಸಿಕ ಭೂ ಗಡಿ ಒಪ್ಪಂದಕ್ಕೆ ಉಭಯ ದೇಶಗಳ ಪ್ರಧಾನಿಗಳಾದ ನರೇಂದ್ರ ಮೋದಿ ಮತ್ತು ಶೇಖ್ ಹಸೀನಾ ಸಹಿ ಹಾಕಿದ್ದಾರೆ.
1971 ರ ಬಾಂಗ್ಲಾ ವಿಮೋಚನಾ ಯುದ್ದದ ಹುತಾತ್ಮರ ಸ್ಮಾರಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಮೋದಿ ಗೌರವ ಸಲ್ಲಿಸಿದರು. ಬಳಿಕ ಬಾಂಗ್ಲಾದೇಶದ ಪ್ರಥಮ ಪ್ರಧಾನಿ ಶೇಖ್ ಮುಜಿಬುರ್ ರೆಹಮಾನ್ ಅವರ ಸ್ಮಾರಕ ಬಂಗಬಂಧು ಮ್ಯೂಸಿಯಂಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
ಈ ಒಪ್ಪಂದದ ಪ್ರಕಾರ, ಬಾಂಗ್ಲಾ ಗಡಿಯಲ್ಲಿರುವ 510ಎಕರೆ ಭೂಮಿಯನ್ನು ಭಾರತ ನಿಯಂತ್ರಿಸಲಿದ್ದು, ಭಾರತ ಬಾಂಗ್ಲಾದೇಶ್ ಗಡಿಯಲ್ಲಿರುವ 10 ಸಾವಿರ ಎಕರೆ ಜಾಗವನ್ನು ಬಾಂಗ್ಲಾ ನಿಯಂತ್ರಿಸಲಿದೆ. ಇದರೊಂದಿಗೆ ಕಳೆದ 41 ವರ್ಷಗಳ ಗಡಿ ವಿವಾದ ಅಂತ್ಯಗೊಂಡಂತಾಗಿದೆ.
ಇದಲ್ಲದೇ ಬಾಂಗ್ಲಾದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಭಾರತ ಮತ್ತು ಬಾಂಗ್ಲಾದೇಶ ನಡುವೆ 2 ಬಸ್ ಸೇವೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಜರಿದ್ದರು.
ಇನ್ಮುಂದೆ ಕೋಲ್ಕತಾ, ಢಾಕಾ, ಅಗರ್ ತಾಲಾ ಮತ್ತು ಢಾಕಾ, ಶಿಲ್ಲಾಂಗ್ ಗುವಾಹಟಿ ಮೂಲಕ ಬಸ್ ಸೇವೆ ದೊರೆಯಲಿದೆ. ಈ ಬಸ್ ಪ್ರಯಾಣದಲ್ಲಿ ಪಶ್ಚಿಮ ಬಂಗಾಳದಿಂದ ಭಾರತದ ಮೂರು ಈಶಾನ್ಯ ರಾಜ್ಯಗಳ ಮೂಲಕ ಹಾದು ಬಾಂಗ್ಲಾದ ರಾಜಧಾನಿ ಢಾಕಾ ತಲುಪಲಿದೆ.