ಇಸ್ಲಾಮಾಬಾದ್ : ಉಗ್ರರನ್ನು ಮಟ್ಟ ಹಾಕಲು ಯಾವುದೇ ದೇಶದೊಳಗೂ ನುಗ್ಗಲು ಸಿದ್ಧ ಎಂಬ ಭಾರತದ ಹೇಳಿಕೆಗೆ ಕಿಡಿಕಾರಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್, ನಮ್ಮನ್ನು ಲಘುವಾಗಿ ಪರಿಗಣಿಸಬೇಡಿ. ನಾವು ಪರಮಾಣು ಸಶಕ್ತ ರಾಷ್ಟ್ರ ಎಂದು ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ ಪರಮಾಣು ಬಾಂಬ್ ಸಿದ್ಧಪಡಿಸಿರುವುದು ಶಬ್ ಏ ಬಾರಾತ್ ಹಬ್ಬದ ವೇಳೆ ಸಿಡಿಸಲು ಅಲ್ಲ, ನಮ್ಮನ್ನು ಬೆದರಿಸಿದವರಿಗೆ ತಿರುಗೇಟು ನೀಡಲು ಎನ್ನುವ ಮೂಲಕ ಅಗತ್ಯ ಬಿದ್ದರೆ ಪರಮಾಣು ದಾಳಿಗೂ ಸಿದ್ಧ ಎಂದು ಹೇಳಿದ್ದಾರೆ.
ಸ್ಥಳೀಯ ಟೀವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಮುಷರ್ರಫ್, ’ನಮ್ಮ ಮೇಲೆ ದಾಳಿ ಮಾಡಿ ಪ್ರಾದೇಶಿಕ ಸಮಗ್ರತೆಯನ್ನು ಪ್ರಶ್ನಿಸಲು ಹೋಗಬೇಡಿ. ನಾವೇನು ಸಾಮಾನ್ಯರಲ್ಲ. ನಮ್ಮ ಬಳಿಯೂ ಪರಮಾಣು ಅಸ್ತ್ರಗಳಿವೆ. ಆದರೆ ಅದನ್ನು ಬಳಸುವಂಥ ಪರಿಸ್ಥಿತಿ ನಿರ್ಮಾಣ ಮಾಡದೇ ಇರುವುದು ಒಳಿತು. ಪಾಕಿಸ್ತಾನವನ್ನು ಅಸ್ಥಿರಗೊಳಿಸುವ ಭಾರತದ ಯತ್ನ ಎಂದಿಗೂ ಫಲಿಸದು' ಎಂದು ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಭಾರತ, ಪಾಕಿಸ್ತಾನವನ್ನು ಲಘುವಾಗಿ ಪರಿಗಣಿಸಬಾರದು. ಅಣ್ವಸ್ತ್ರಗಳು ಇರುವುದು ದೇಶದ ರಕ್ಷಣೆಗಾಗಿಯೇ ಹೊರತು. ಸಂಭ್ರಮಾಚರಣೆಗಾಗಿ ಅಲ್ಲ. ಅಣ್ವಸ್ತ್ರಗಳನ್ನು ಬಳಸುವುದು ನಮ್ಮ ಉದ್ದೇಶವಲ್ಲ. ಆದರೆ, ನಮ್ಮ ಅಸ್ತಿತ್ವಕ್ಕೇ ಸಂಚಕಾರ ಎದುರಾದಾಗ ಅಣ್ವಸ್ತ್ರಗಳನ್ನು ಹೊಂದಿದ್ದು ಬಳಸದೇ ಹೋದಲ್ಲಿ, ಪ್ರಯೋಜನವಾದರೂ ಏನು. ಹೀಗಾಗಿ ಯಾವುದೇ ಪರಿಸ್ಥಿತಿ ಎದುರಿಸಲು ಪಾಕಿಸ್ತಾನಿಯರು ಸಜ್ಜಾಗಿರಬೇಕು ಎಂದು ಮಾಜಿ ಸೇನಾ ಮುಖ್ಯಸ್ಥ ಕರೆ ನೀಡಿದ್ದಾರೆ.
ಇದೇ ವೇಳೆ, ಭಾರತ ಮ್ಯಾನ್ಮಾರ್ ಗಡಿಯೊಳಕ್ಕೆ ನುಗ್ಗಿ ನಾಗಾ ಉಗ್ರರನ್ನು ಸದೆಬಡಿದಿರುವುದನ್ನು ಅತ್ಯಂತ ಆಕ್ರಮಣಕಾರಿ ಎಂದು ಮುಷರ್ರಫ್ ಕಿಡಿಕಾರಿದ್ದಾರೆ. ಕಳೆದ ವರ್ಷ ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ಭಾರತ ಆಕ್ರಮಣಕಾರಿ ನೀತಿಯನ್ನು ಅಳವಡಿಕೊಂಡಿದೆ. ಪಾಕಿಸ್ತಾನ ಸರ್ಕಾರ ಕೂಡ ಭಾರತದ ವಿರುದ್ಧ ಇದೇ ರೀತಿಯ ಆಕ್ರಮಣಕಾರಿ ನೀತಿಯನ್ನು ಅಳವಡಿಕೊಳ್ಳಬೇಕು. ಏಟಿಗೆ ಸೂಕ್ತ ಎದಿರೇಟನ್ನು ನೀಡಬೇಕು ಎಂದು ಪರ್ವೇಜ್ ಪಾಕ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.