ಜೈಪುರ : ಮ್ಯಾನ್ಮಾರ್ ಕಾರ್ಯಾಚರಣೆಯ ಬಳಿಕ ಸೇನೆಯ ಮೇಲಿನ ದೃಷ್ಟಿಕೋನ ಬದಲಾಗಿದೆ
ಕಳೆದ 40-50 ವರ್ಷಗಳಿಂದ ಯಾವುದೇ ಯುದ್ಧವನ್ನು ಹೋರಾಡದಿರುವ ಭಾರತೀಯ ಸೇನೆಯ ಮಹತ್ವ ಕಡಿಮೆಯಾಗತೊಡಗಿದೆ ಎಂದು ರಕ್ಷಾಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆ ನೀಡಿದ್ದಾರೆ.
ಈ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ ತನ್ನ ಹೇಳಿಕೆಯ ದೂರಗಾಮಿ ಪರಿಣಾಮಗಳನ್ನು ಅರಿತು ಎಚ್ಚೆತ್ತ ಅವರು, ಯುದ್ಧಗಳು ನಡೆಯಬೇಕೆಂದು ತಾವು ಹೇಳಿಲ್ಲ ಅಥವಾ ತಾವು ಯುದ್ಧಗಳ ಪರವಾಗಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ದೇಶದ ಗಡಿಗಳಲ್ಲಿರುವ ಸವಾಲುಗಳನ್ನು ಮತ್ತು ಅವುಗಳ ಪರಿಹಾರಗಳು ಎಂಬ ಕುರಿತಾಗಿ ಜೈಪುರದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಪರಿಕ್ಕರ್, ನಮ್ಮ ಸೈನಿಕರು ಅಪಾರವಾದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಏಕೆಂದರೆ ಶಾಂತಿ ಕಾಲದಲ್ಲಿ ಸೇನೆಯ ಮೇಲಿನ ಜನರ ಗೌರವಾದರ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ರಕ್ಷಣಾ ವಿಷಯಗಳಿಗೆ ಸಂಬಂಧಿಸಿದಂತೆ ನಾನು ಅನೇಕ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಕೆಲವರು ಆ ಪ್ರಕಾರ ಕ್ರಿಯಾಶೀಲರಾಗಿದ್ದಾರೆ. ಇನ್ನು ಕೆಲವರು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದಾರೆ. ನಮ್ಮ ಸೇನೆಯ ಮಹತ್ವ ಕಡಿಮೆಯಾಗಲು ಮುಖ್ಯ ಕಾರಣವೇನೆಂದರೆ ಕಳೆದ 40ರಿಂದ 50 ವರ್ಷಗಳಲ್ಲಿ ನಾವು ಯಾವುದೇ ಯುದ್ಧವನ್ನು ಮಾಡಿಲ್ಲ. ಹಾಗೆಂದ ಮಾತ್ರಕ್ಕೆ ನಾವು ಯುದ್ಧವನ್ನು ಮಾಡಬೇಕು ಎಂದು ಹೇಳುತ್ತಿಲ್ಲ. ಆದರೆ ಯುದ್ಧಗಳೇ ಇಲ್ಲದಿರುವುದರಿಂದ ಜನರ ದೃಷ್ಟಿಯಲ್ಲಿ ಸೇನೆಯ ಮಹತ್ವ ಕಡಿಮೆಯಾಗಿದೆ ಹೇಳಿದರು.
ಮಣಿಪುರದಲ್ಲಿ ಇತ್ತೀಚೆಗೆ ನಾಗಾ ಉಗ್ರರು 18 ಭಾರತೀಯ ಸೈನಿಕರನ್ನು ಕೊಂದ ಬಳಿಕ ಅದಕ್ಕೆ ಪ್ರತೀಕಾರವಾಗಿ ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ಭಾರತೀಯ ಸೈನಿಕರು ನಡೆಸಿದ ಕಾರ್ಯಾಚರಣೆಯ ಫಲವಾಗಿ ಸೇನೆಯ ಮಹತ್ವ ಏನೆಂಬುದು ಈಗ ಜನರಿಗೆ ಅರ್ಥವಾಗತೊಡಗಿದೆ. ಮ್ಯಾನ್ಮಾರ್ ಕಾರ್ಯಾಚರಣೆಯ ಬಳಿಕ ದೇಶದ ಗಡಿ ರಕ್ಷಣೆಯಲ್ಲಿ ಸೇನೆಯ ಮೇಲಿರುವ ಜವಾಬ್ದಾರಿಯ ಬಗ್ಗೆ ಜನರ ದೃಷ್ಟಿಕೋನ ಬದಲಾಗಿದೆ ಎಂದು ತಿಳಿಸಿದರು.