ನವದೆಹಲಿ : ಇತ್ತೀಚೆಗೆ ಮಣಿಪುರದಲ್ಲಿ 18 ಸೈನಿಕರ ಹತ್ಯೆ ನಡೆಸಿದ್ದ ನಾಗಾ ಉಗ್ರ ಸಂಘಟನೆ ’ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್- ಖಪ್ಲಂಗ್ (ಎನ್.ಎಸ್.ಸಿ.ಎನ್-ಕೆ)' ಮೇಲೆ ಮತ್ತೆ ನಿಷೇಧ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಭಾರತೀಯ ಸೇನೆ ಮ್ಯಾನ್ಮಾರ್ ಗಡಿಗೆ ನುಗ್ಗಿ ಈಶಾನ್ಯ ನಾಗಾ ಬಂಡುಕೋರರನ್ನು ಮಟ್ಟಹಾಕಿದ ಮರುದಿನ, ಅಂದರೆ ಜೂ.10ರಂದು ಎನ್.ಎಸ್.ಸಿ.ಎನ್ (ಕೆ)ಯನ್ನು ಮತ್ತೆ ನಿಷೇಧಿತ ಉಗ್ರ ಸಂಘಟನೆ ಪಟ್ಟಿಗೆ ಸೇರಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಕೇಂದ್ರ ಗೃಹ ಸಚಿವಾಲಯವು ಈಗಾಗಲೇ ಸಂಪುಟ ಟಿಪ್ಪಣಿ ಸಿದ್ಧಪಡಿಸಿದ್ದು, ಶೀಘ್ರವೇ ಅದನ್ನು ಸಚಿವ ಸಂಪುಟದ ಮುಂದೆ ಮಂಡಿಸಲಿದೆ.
2001ರಲ್ಲೇ ಈ ಸಂಘಟನೆಯನ್ನು ನಿಷೇಧಿಸಲಾಗಿತ್ತಾದರೂ, ಬಳಿಕ ಸಂಘಟನೆ ಸರ್ಕಾರದ ಜೊತೆ ಕದನವಿರಾಮಕ್ಕೆ ಸಹಿ ಹಾಕಿದ್ದ ಹಿನ್ನೆಲೆಯಲ್ಲಿ, ಅದರ ಮೇಲಿನ ನಿಷೇಧವನ್ನು ಹಿಂದಕ್ಕೆ ಪಡೆಯಲಾಯಿತು.