ಇಸ್ಲಾಮಾಬಾದ್ : ’ಪಾಕಿಸ್ತಾನ ಪರಮಾಣು ಬಾಂಬ್ ತಯಾರಿಸಿರುವುದು ಹಬ್ಬಕ್ಕೆ ಹಾರಿಸಲು ಅಲ್ಲ, ದೇಶದ ಭದ್ರತೆಗೆ ಸವಾಲು ಎದುರಾದಾಗ ಪ್ರಯೋಗಿಸಲು' ಎಂದು ಪಾಕ್ ನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಕಿಡಿಕಾರಿದ ಬೆನ್ನಲ್ಲೇ, ಪಾಕಿಸ್ತಾನದ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಕೂಡ ಭಾರತದ ವಿರುದ್ಧ ಕಿಡಿ ಕಾರಿದ್ದಾರೆ. ಕಾಶ್ಮೀರಕ್ಕಾಗಿ, ದೇಶಕ್ಕಾಗಿ ಯಾವ ಬೆಲೆಯನ್ನಾದರೂ ಪಾಕಿಸ್ತಾನ ತೆರಲು ಸಿದ್ಧ ಎಂದು ಗುಡುಗಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ಸೇನಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಶರೀಫ್, ನೆರೆಹೊರೆಯ ಜೊತೆ ಶಾಂತಿ ಕಾಪಾಡಿಕೊಂಡು ಹೋಗಲು ನಾವು ಬದ್ಧ. ಆದರೆ ಒಂದು ವೇಳೆ ನಮ್ಮ ಸಾರ್ವಭೌಮತೆ ಮತ್ತು ಗೌರವಕ್ಕೆ ಧಕ್ಕೆ ಬಂದರೆ, ಅದು ಕಾಶ್ಮೀರ ವಿಷಯವೇ ಆಗಿರಬಹುದು, ನೈಸರ್ಗಿಕ ಸಂಪತ್ತಿನ ವಿಷಯವೇ ಆಗಿರಬಹುದು, ಹೊಸ ಬಂದರು ನಿರ್ಮಾಣವೇ ಆಗಿರಬಹುದು, ಯಾವುದೇ ತ್ಯಾಗಕ್ಕೂ ನಾವು ಸಿದ್ಧ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ನೆರೆಯ ದೇಶದೊಂದಿಗೆ ಶಾಂತಿ ಕಾಪಾಡಿಕೊಂಡು ಬರಲು ನಾವು ಸದಾ ಸಹಕಾರ ನೀಡುತ್ತಿದ್ದೇವೆ. ಆದರೆ ಆ ರಾಷ್ಟ್ರ ಮಾತ್ರ ಪದೇ ಪದೇ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುವ ಮೂಲಕ ಮತ್ತು ಬಲೂಚಿಸ್ತಾನ ಸೇರಿದಂತೆ ವಿವಿಧ ಭಾಗಗಳಲ್ಲಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುವ ಮೂಲಕ ಪಾಕಿಸ್ತಾನದಲ್ಲಿ ಅಸ್ಥಿರತೆ ಉಂಟು ಮಾಡಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಈ ನಡುವೆ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್, ಈ ವಲಯದಲ್ಲಿನ ಜನರ ಜೀವನವನ್ನು ಹಸನು ಮಾಡುವ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಆದರೆ ಶತ್ರು ರಾಷ್ಟ್ರಗಳು ಯೋಜನೆಗೆ ಅಡ್ಡಿ ಮಾಡುವ ಎಲ್ಲಾ ಯತ್ನಗಳನ್ನೂ ನಡೆಸುತ್ತಿವೆ. ಆದರೆ ಇದಕ್ಕೆಲ್ಲಾ ಪಾಕಿಸ್ತಾನ ಜಗ್ಗದು ಎಂದು ಹೇಳಿದ್ದಾರೆ.