ನವದೆಹಲಿ : ಬುಡುಕಟ್ಟು ಕಲ್ಯಾಣಕ್ಕೆ ಜಾರಿಯಾಗಿರುವ ವಿವಿಧ ಯೋಜನೆಗಳ ಪ್ರಗತಿಯನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲನೆ ನಡೆಸಿದ್ದಾರೆ.
ವನಬಂಧು ಕಲ್ಯಾಣ ಯೋಜನೆಯನ್ನು ಒಳಗೊಂಡತೆ ವಿವಿಧ ಬುಡಕಟ್ಟು ಕಲ್ಯಾಣ ಯೋಜನೆಗಳ ಪರಿಶೀಲನಾ ಸಭೆ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು, ರಾಷ್ಟ್ರದಾದ್ಯಂತ ವಿವಿಧ ಬುಡಕಟ್ಟು ಜನಾಂಗದ ಒಳಿತಿಗಾಗಿ ಜಾರಿಗೆ ತರಲಾಗಿರುವ ಈ ಯೋಜನೆಗಳ ನಡುವೆ ಹೆಚ್ಚಿನ ಹೊಂದಾಣಿಕೆ ಅಗತ್ಯ ಎಂದು ಪ್ರಧಾನಿ ಕರೆ ನೀಡಿದ್ದಾರೆ.
ಪ್ರಧಾನ ಮಂತ್ರಿ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ಕೇಂದ್ರ ಸರ್ಕಾರ ಇಲಾಖೆಗಳು ಮತ್ತು ರಾಜ್ಯ ಸರ್ಕಾರ ಹೊಂದಾಣಿಕೆಯಲ್ಲಿ ಕೆಲಸ ಮಾಡಿ ಬುಡಕಟ್ಟು ಕಲ್ಯಾಣದ ಗುರಿಗಳನ್ನು ಮುಟ್ಟಬೇಕು ಎಂದು ಪ್ರಧಾನಿ ಹೇಳಿದ್ದಾರೆ ಎಂದಿದೆ.
ಬುಡಕಟ್ಟು ಸಮುದಾಯದ ಜನರಲ್ಲಿ ಸಿಕಲ್ ಸೆಲ್ ಅನೆಮಿಯಾ ರಕ್ತ ಕೋಶದ ತೊಂದರೆಯನ್ನು(ರಕ್ತ ಹೀನತೆ) ಪತ್ತೆ ಹಚ್ಚುವ ಪ್ರಗತಿಯ ಬಗ್ಗೆ ಮೋದಿ ವಿವರಣೆ ಕೇಳಿದರು ಎಂದು ತಿಳಿದುಬಂದಿದೆ.
ಜನ ಧನ ಯೋಜನೆ ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳು ಬುಡಕಟ್ಟು ಸಮುದಾಯಗಳಿಗೆ ಹೇಗೆ ಸಹಾಯ ಮಾಡುತ್ತಿವೆ ಎಂಬುದನ್ನು ಕೂಡ ತಿಳಿದುಕೊಳ್ಳಲು ಪ್ರಯತ್ನಿಸಿದರು ಎನ್ನಲಾಗಿದೆ.
ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ಹಬ್ಬವನ್ನು ಆಚರಿಸುವ ಬಗ್ಗೆಯೂ ಪ್ರಧಾನಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಬುಡಕಟ್ಟು ವ್ಯವಹಾರಗಳ ಸಚಿವ ಜುವಲ್ ಓರಾಮ್ ಮತ್ತು ಹಿರಿಯ ಅಧಿಕಾರಿಗಳು ಈ ಉನ್ನತ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.