ವಾರಣಾಸಿ : ಭಾರೀ ಮಳೆಯ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ವಾರಣಾಸಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇದರಿಂದ ಸತತ ಎರಡನೇ ಬಾರಿ ಪ್ರಧಾನಿ ತಮ್ಮ ವಾರಣಾಸಿ ಪ್ರವಾಸವನ್ನು ರದ್ದುಗೊಳಿಸಿದಂತಾಗಿದೆ.
ಆದರೆ ಈ ಸಂಬಂಧ ಮಾತನಾಡಿದ ರಾಜ್ಯ ಬಿಜೆಪಿ ಘಟಕದ ನಾಯಕ ಲಕ್ಷ್ಮಿಕಾಂತ್ ಬಾಜಪಾಯಿ, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿತ್ತು, ಗುರುವಾರ ಪ್ರಧಾನಿ ಮೋದಿಯವರ ಭಾಷಣ ನಡೆಯಬೇಕಿದ್ದ ಡಿ ಎಲ್ ಡಬ್ಲ್ಯೂ ಮೈದಾನದಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನ ಸಾವಿನಿಂದಾಗಿ ಪ್ರಧಾನಿಯವರ ಕಾರ್ಯಕ್ರಮ ರದ್ದಾಗಿದೆ ಎಂದು ಹೇಳಿದ್ದಾರೆ.
ಡಿ ಎಲ್ ಡಬ್ಲ್ಯೂ ಮೈದಾನದಲ್ಲಿ ಪ್ರಧಾನಿ ಮೋದಿಯವರ ಭಾಷಣಕ್ಕೆ ಬುಧವಾರ ರಾತ್ರಿ ಸ್ಟೇಜ್ ನಲ್ಲಿ ಹೂಗಳ ಶೃಂಗಾರ ಮಾಡುವ ಸಂದರ್ಭದಲ್ಲಿ 19 ವರ್ಷದ ದೇವನಾಥ್ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದನು.
ಇದರ ಮೊದಲು ಜೂ.28 ರಂದು ಪ್ರಧಾನಿ ವಾರಣಾಸಿ ಭೇಟಿ ಭಾರೀ ಮಳೆಯ ಕಾರಣದಿಂದ ರದ್ದಾಗಿತ್ತು. ನಂತರ ಇಂಧನ ಸಚಿವ ಪಿಯೂಷ್ ಗೊಯೆಲ್ ಮೇಲ್ವಿಚಾರಣೆಯಲ್ಲಿ ಪ್ರಧಾನಿ ಮೋದಿಯವರ ಭೇಟಿಯನ್ನು ಜು. 16 ಕ್ಕೆ ನಿಗದಿಪಡಿಸಿ, ಡಿ ಎಲ್ ಡಬ್ಲ್ಯೂ ಮೈದಾನದ ಸುತ್ತ ವಾಟರ್ ಪ್ರೂಫ್ ಟೆಂಟ್, ಸುಧಾರಿತ ಒಳಚರಂಡಿ ವ್ಯವಸ್ಥೆ ಮಾಡಲಾಗಿತ್ತು.
ಕೊನೆಯ ಬಾರಿ ಡಿಸೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ವಾರಣಾಸಿಗೆ ಭೇಟಿ ನೀಡಿದ್ದರು.