ನವದೆಹಲಿ : ಯಾಕೂಬ್ ಮೆಮೋನ್ ಗಲ್ಲು ಶಿಕ್ಷೆಯನ್ನು ವಜಾಗೊಳಿಸಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ಮಾಡಿದ ಇಬ್ಬರು ನ್ಯಾಯಾಧೀಶರುಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಈಗ ಅರ್ಜಿ ವಿಸ್ತೃತ ಪೀಠಕ್ಕೆ ವರ್ಗಾವಣೆಯಾಗಿದೆ.
1993 ರ ಮುಂಬೈ ಸರಣಿ ಸ್ಪೋಟದ ಸಂಚಿನಲ್ಲಿ ಭಾಗಿಯಾದ ಕಾರಣ ಗಲ್ಲು ಶಿಕ್ಷೆಗೆ ಗುರಿಯಾದ ಯಾಕೂಬ್ ನ ಶಿಕ್ಷೆಯನ್ನು ವಜಾಗೊಳಿಸಿ ಆದೇಶ ನೀಡಲು ಮತ್ತೊಮ್ಮೆ ಉಛ್ಚ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಮಮೂರ್ತಿ ಎ.ಆರ್.ದಾವೆ ಹಾಗೂ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಬೇರೆ ಬೇರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ನ್ಯಾ.ದಾವೆ ಅವರು ಯಾಕೂಬ್ ನ ಅರ್ಜಿಯನ್ನು ತೞಿಹಾಕಿದರೆ, ನ್ಯಾ.ಜೋಸೆಫ್ ಮರಣ ದಂಡನೆ ವಾರಂಟನ್ನು ಸ್ಥಗಿತಗೊಳಿಸಿದ್ದಾರೆ.
ಈಗ ಅರ್ಜಿ ಮುಖ್ಯ ನ್ಯಾಯಮೂರ್ತಿಯವರ ಪೀಠಕ್ಕೆ ವರ್ಗಾವಣೆಯಾಗಿದ್ದು ಬುಧವಾರ, ಜು.೨೯ಕ್ಕೆ ಅರ್ಜಿ ಇತ್ಯರ್ಥವಾಗುವ ನಿರೀಕ್ಷೆ ಇದೆ.
ಮೆಮೋನ್ ತನ್ನ ಅರ್ಜಿಯಲ್ಲಿ ತಾನು 1996ರಿಂದ ಸ್ಚಿಜ್ಹೋಫ್ರೀನಿಯಾ ಕಾಯಿಲೆಯಿಂದ ಬಳಲುತ್ತಿದ್ದು, ಸುಮಾರು 20 ವರ್ಷಗಳಿಂದ ಜೈಲಿನಲ್ಲಿ ಬಂಧನದಲ್ಲಿದ್ದೇನೆ. ಇದು ಒಬ್ಬ ಅಪರಾಧಿ ಅನುಭವಿಸಬೇಕಾದ ಆಜೀವ ಜೈಲು ಶಿಕ್ಷೆ ಅವಧಿಗಿಂತಲೂ ಅಧಿಕವಾಗಿದೆ. ಒಬ್ಬ ಅಪರಾಧಿಗೆ ಒಂದೇ ಅಪರಾಧಕ್ಕೆ ಆಜೀವ ಶಿಕ್ಷೆ ಮತ್ತು ಮರಣ ದಂಡನೆ ಎರಡನ್ನೂ ವಿಧಿಸುವ ಹಾಗಿಲ್ಲ, ಹಾಗಾಗಿ ಮರಣ ದಂಡನೆಯನ್ನು ವಜಾಗೊಳಿಸಬೇಕು ಎಂದು ಅರ್ಜಿಯಲ್ಲಿ ವಾದಿಸಿದ್ದಾನೆ.
1993 ಮಾರ್ಚ್ 12 ರಂದು ನಡೆದ ಮುಂಬೈ ಸರಣಿ ಬಾಂಬ್ ಸ್ಪೋಟಗಳಲ್ಲಿ 257 ನಿರಪರಾಧಿಗಳು ಸಾವನ್ನಪ್ಪಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂದಿದ್ದರು.
ಎರಡು ದಶಕಗಳಿಂದ ನಡೆಯುತ್ತಿರುವ ವಿಚಾರಣೆ ಇತ್ತೀಚೆಗೆ ಕೊನೆಗೊಂಡು ಯಾಕೂಬ್ ಗೆ ಮರಣ ದಂಡನೆ ವಿಧಿಸಲಾಗಿತ್ತು. ಈ ಮಧ್ಯೆ ಅವನು ರಾಷ್ಟ್ರಪತಿ ಸೇರಿದಂತೆ ಶಿಕ್ಷೆಯನ್ನು ವಜಾಗೊಳಿಸಲು ತನ್ನೆಲ್ಲಾ ಪ್ರಯತ್ನಗಳನ್ನೂ ಮಾಡಿದ್ದಾನೆ.
ಜು.30ರಂದು ಯಾಕೂಬ್ ಗೆ ಗಲ್ಲು ನೀದುವ ಬಗ್ಗೆ ಎಲ್ಲಾ ತಯಾರಿಗಳೂ ನಡೆಯುತ್ತಿದ್ದು, ಅವನ ರಕ್ಷಣೆ ಮತ್ತು ಗಲ್ಲು ಶಿಕ್ಷೆಗೆ ಬೇಕಾದ ತಯಾರಿಗೆ ಸುಮಾರು 25ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ.
ಯಾಕೂಬ್ ಗೆ ವಿಧಿಸಲಾದ ಮರಣ ದಂಡನೆಯನ್ನು ವಜಾಗೊಳಿಸಬೇಕೆಂದು ಅನೇಕ ಮುಸ್ಲಿಂ ಮುಖಂಡರು ಸೇರಿದಂತೆ ಕೆಲವು ಪ್ರಮುಖರು ವಾದಿಸತೊಡಗಿದ್ದಾರೆ. ಅವನು ಒಬ್ಬ ಮುಸ್ಲಿಂ ಎಂಬ ಕಾರಣಕ್ಕೆ ಅವನಿಗೆ ಮರಣ ದಂಡನೆ ವಿಧಿಸಲಾಗಿದೆ ಎಂಬ ರಾಜಕೀಯ ಪ್ರೇರಿತ ವಾದವನ್ನೂ ಸಂಸದ ಅಸದುದ್ದಿನ್ ಓವೈಸ್ವಿಯಂಥವರು ಮಾಡಿದ್ದಾರೆ.
ನೂರಾರು ಅಮಾಯಕ ನಾಗರಿಕರ ಬರ್ಬರ ಹತ್ಯೆಗೆ ಮಿಡಿಯದ ಅವರುಗಳ ಮನಸ್ಸು ಕೇವಲ ಒಬ್ಬ ಅಪರಾಧಿಗೆ ಮಿಡಿಯುತ್ತಿರುವುದು ದೇಶಾದ್ಯಂತ ಟೀಕೆಗೆ ಗುರಿಯಾಗಿದೆ.