ನವದೆಹಲಿ : ಮಂಗಳವಾರ ರಾಜ್ಯಸಭೆಯಲ್ಲಿ ಬಾಲಾಪರಾಧಿ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದ ಮಸೂದೆಗೆ ಈಗ ರಾಜ್ಯಸಭೆಯಲ್ಲೂ ಅಂಗೀಕಾರ ದೊರೆಕಿದೆ. ಈ ಸಂದರ್ಭದಲ್ಲಿ ಕಲಾಪದಲ್ಲಿ ಉಪಸ್ಥಿತರಿದ್ದ ನಿರ್ಭಯಾ ಪೋಷಕರು ಸಂತಸ ವ್ಯಕ್ತಪಡಿಸಿದರು.
ಈ ಕಾಯ್ದೆಯ ಪ್ರಕಾರ, ಘೋರ ಅಪರಾಧ ಮಾಡಿದ 16-18 ವರ್ಷ ನಡುವಿನ ವಯಸ್ಸಿನವರನ್ನು ವಯಸ್ಕರಂತೆ ವಿಚಾರಣೆಗೆ ಹಾಜರುಪಡಿಸಲಾಗುವುದು. ಜೈಲು ಶಿಕ್ಷೆಗೆ ಗುರಿಯಾದ ಬಾಲಾಪರಾಧಿಯನ್ನು ಇತರ ಕೈದಿಗಳ ಜತೆ ಬಂಧನದಲ್ಲಿಡದೇ, ಪ್ರತ್ಯೇಕವಾಗಿ (ಸುಧಾರಣಾ ಕೇಂದ್ರ) ಇರಿಸಲಾಗುವುದು. ಆತನಿಗೆ 21 ವರ್ಷ ತುಂಬಿದ ನಂತರ ಶಿಕ್ಷೆ ಮುಂದುವರಿಸಬೇಕೊ ಅಥವಾ ಬಿಡುಗಡೆ ಮಾಡಬೇಕೊ ಎಂಬುದನ್ನು ಪರಿಶೀಲಿಸಲಾಗುವುದು. ಮಕ್ಕಳಿಗೆ ಮದ್ಯ ಅಥವಾ ಡ್ರಗ್ಸ್ನಂಥ ಮಾದಕ ವಸ್ತುಗಳನ್ನು ನೀಡುವ ವ್ಯಕ್ತಿಗೆ 7 ವರ್ಷ ಜೈಲು ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ.
ಎಷ್ಟೇ ಗಂಭೀರ ಅಪರಾಧ ಎಸಗಿದ್ದರೂ ಬಾಲಾಪರಾಧಿಗೆ ಗರಿಷ್ಠ 7 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ ಜೀವಾವಧಿ ಹಾಗೂ ಮರಣ ದಂಡನೆಯಂಥ ಶಿಕ್ಷೆ ವಿಧಿಸಲು ಅವಕಾಶವಿಲ್ಲ.