ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂವಿಧಾನ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜಿಎಸ್ಟಿ ಎಂದರೆ ಪರಿವರ್ತನೆ ಮತ್ತು ಪಾರದರ್ಶಕತೆಯೆಡೆಗೆ ಮಹಾನ್ ಹೆಜ್ಜೆ ಎಂದು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ,ಎಲ್ಲಾ ರಾಜಕೀಯ ಪಕ್ಷಗಳಿಗೂ ಧನ್ಯವಾದ ಅರ್ಪಿಸುತ್ತಾ ‘ಜಿಎಸ್ಟಿ ಎಂಬುದರ ಅರ್ಥ ಗ್ರೇಟ್ ಸ್ಟೆಪ್ ಟವರ್ಡ್ಸ್ ಟ್ರಾನ್ಸಪಾರ್ಮೇಷನ್’, ‘ಗ್ರೇಟ್ ಸ್ಟೆಪ್ ಟವರ್ಡ್ಸ್ ಟ್ರಾನ್ಸಪರೆನ್ಸಿ’ ಎಂದು ಬಣ್ಣಿಸಿದರು.
ಜಿಎಸ್ಟಿ ಇದು ಯಾವುದೇ ಒಂದು ನಿರ್ದಿಷ್ಟ ಪಕ್ಷದ ವಿಜಯವಲ್ಲ. ತೆರಿಗೆ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಷ್ಟ್ರ ಕಂಡಿರುವ ಏಳು ಬೀಳುಗಳನ್ನು ಅರ್ಥ ಮಾಡಿಕೊಳ್ಳಲು ಇದೊಂದೇ ಉದಾಹರಣೆ ಸಾಕು’ ಇದು ಯಾವುದೇ ಒಂದು ನಿರ್ದಿಷ್ಟ ಪಕ್ಷದ ವಿಜಯವಲ್ಲ. ಇದು ಪ್ರಜಾತಾಂತ್ರಿಕ ತತ್ವಗಳ ವಿಜಯ. ಎಲ್ಲಾ ರಾಜಕೀಯ ಪಕ್ಷಗಳ ವಿಜಯ ಎಂದು ಮೋದಿ ಹೇಳಿದರು.
ಲೋಕತಂತ್ರ ಎಂದರೆ ಕೇವಲ ಜನಾಭಿಪ್ರಾಯದ ಆಟವಲ್ಲ. ಅದು ಸಹಮತ ರೂಪಿಸುವ ಪಯಣ ಕೂಡಾ. ಈ ನಿಟ್ಟಿನಲ್ಲಿ ನಾವು ಸೋನಿಯಾಜಿ, ಮನಮೋಹನ್ ಸಿಂಗ್ಜಿ ಅವರಷ್ಟೇ ಅಲ್ಲ ಎಲ್ಲರ ಜೊತೆಗೂ ಸಮಾಲೋಚನೆ ಮಾಡಿದ್ದೇವೆ. ಜಿಎಸ್ಟಿ ಮೂಲಕ ನಾವು ಏಕರೂಪದ ತೆರಿಗೆ ವ್ಯವಸ್ಥೆ ತರುವ ಉದ್ದೇಶ ಹೊಂದಿದ್ದೇವೆ. ’ಗ್ರಾಹಕನೇ ದೊರೆ’ ಎಂಬುದು ಇದರ ಸ್ಪಷ್ಟ ಸಂದೇಶ ಎಂದು ಮೋದಿ ನುಡಿದರು.
ರಾಷ್ಟ್ರ ನೀತಿಯು ರಾಜನೀತಿಗಿಂತ ದೊಡ್ಡದು. ನಮ್ಮ ರಾಜ್ಯಗಳು ಸ್ವಾವಲಂಬಿಗಳಾಗಿಲ್ಲ ಜೊತೆಗೆ ಪರಸ್ಪರ ಅವಲಂಬಿಗಳು ಕೂಡಾ. ಜಿಎಸ್ಟಿಯು ಬೆಳವಣಿಗೆಯಾಗದ ರಾಜ್ಯಗಳ ಆರ್ಥಿಕತೆಗೆ ಬಲ ತುಂಬಲಿದೆ ಎಂದು ಹೇಳಿದರು.