ನವದೆಹಲಿ : ಭಾರತ ಮತ್ತು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ನಡೆಯಬೇಕಾಗಿದ್ದ ಮಾತುಕತೆ ರದ್ದಾಗಿರುವುದು ದುರದೃಷ್ಟಕರ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ. ಭಾರತ ಈ ಮಾತುಕತೆ ನಡೆಯಬೇಕೆಂದು ಬಯಸಿತ್ತು, ಆದರೆ ಪಾಕಿಸ್ತಾನ ಇದನ್ನು ರದ್ದುಗೊಳಿಸಿದೆ ಎಂದು ಹೇಳಿದರು.
ನಾವು ಪಾಕಿಸ್ತಾನದ ಜೊತೆ ಉತ್ತಮ ಬಾಂಧವ್ಯಕ್ಕಾಗಿ ಪ್ರಯತ್ನ ಮುಂದುವರಿಸುತ್ತೇವೆ.... ಊಳಿದಿದ್ದು ಅವರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಮಾತುಕತೆಯಲ್ಲಿ ಕಾಶ್ಮೀರ ಸಮಸ್ಯೆಯನ್ನು ತರಬಾರದು ಮತ್ತು ಪಾಕಿಸ್ತಾನದ ಎನ್ ಎಸ್ ಎ ಸರ್ತಾಜ್ ಅಜೀಜ್ ಅವರು ದೆಹಲಿಯಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡಬಾರದು ಎನ್ನುವ ಭಾರತದ ನಿಲುವನ್ನು ಪಾಕಿಸ್ತಾನ ಒಪ್ಪಲಿ ಸಾಧ್ಯವಿಲ್ಲ ಎಂದು ಪಾಕಿಸ್ತಾನ ಶನಿವಾರ ರಾತ್ರಿ ಹೇಳಿತ್ತು. ಇದರಿಂದ ಭಾನುವಾರ ಮತ್ತು ಸೋಮವಾರ ನಡೆಯಬೇಕಿದ್ದ ಮಾತುಕತೆ ರದ್ದುಗೊಂಡಿತ್ತು.
ಕಳೆದ ತಿಂಗಳು ರಷ್ಯಾದ ಉಫಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್ ನಡುವೆ ನಡೆದ ಮಾತುಕತೆಯಂತೆ ಎನ್ ಎಸ್ ಎ ಮಾತುಕತೆ ಕೇವಲ ಭಯೋತ್ಪಾದನೆಗೆ ಮಾತ್ರ ಸೀಮಿತವಾಗಬೇಕು ಎಂದು ಭಾರತ ಮೊದಲಿಂದಲೂ ಪ್ರತಿಪಾದಿಸಿತ್ತು.
ಆದರೆ ಪಾಕಿಸ್ತಾನ ಸರ್ಕಾರ, ಭಾರತ ಹೇಳಿದ ನಿಯಮಗಳ ಪ್ರಕಾರ ಮಾತುಕತೆ ನಡೆದರೆ ಯಾವುದೇ ಪ್ರಯೋಜನವಿಲ್ಲ ಎಂದು ಶನಿವಾರ ರಾತ್ರಿ ಹೇಳಿತ್ತು.
ಪಾಕಿಸ್ತಾನದ ನಿರ್ಧಾರ ದುರದೃಷ್ಟಕರ. ಭಾರತ ಯಾವುದೇ ಮಾತುಕತೆ ಪೂರ್ವ ನಿಯಮಗಳನ್ನು ಹೇರಿರಲಿಲ್ಲ. ಪಾಕಿಸ್ತಾನ ಮೊದಲೇ ಒಪ್ಪಿಕೊಂಡ ಸಿಮ್ಲಾ ಮತ್ತು ಉಫಾ ಒಪ್ಪಂದವನ್ನು ಗೌರವಿಸಬೇಕೆಂದು ಪುನರುಚ್ಚಿಸಿದ್ದೇವೆ ಎಂದು ವಿದೇಶಾಂಗ ವಕ್ತಾರ ಹೇಳಿದ್ದರು.