ನವದೆಹಲಿ : 2016-17ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ಫೆಬ್ರುವರಿ 23ರಿಂದ ಆರಂಭವಾಗಲಿದ್ದು, ಫೆ. 29 ರಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ.
ಅಧಿವೇಶನ ಒಂದು ತಿಂಗಳ ಮೇಲೆ ಬಿಡುವಿನ ಜೊತೆ ಎರಡು ಭಾಗಗಳಲ್ಲಿ ನಡೆಯಲಿದ್ದು, ಮೇ 13 ರಂದು ಕೊನೆಗೊಳ್ಳುತ್ತದೆ. 5 ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲಿ ಭಾಗವಹಿಸುವ ಎಲ್ಲಾ ಪಕ್ಷಗಳ ನಾಯಕರನ್ನು ಸಂಪರ್ಕಿಸಿದ ರಾಜನಾಥ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಗುರುವಾರ ಬೆಳಗ್ಗೆ ಅಧಿವೇಶನದ ದಿನಾಂಕವನ್ನು ನಿಗದಿಪಡಿಸಿದೆ.
ಮೊದಲ ಹಂತದಲ್ಲಿ ಅಧಿವೇಶನ ಫೆ. 23 ರಿಂದ ಮಾ. 16 ರವರೆಗೆ ನಡೆಯಲಿದ್ದು, ಪುನಃ ಏ. 25 ರಂದು ಪ್ರಾರಂಭವಾಗಲಿದೆ. ಇದರಿಂದ ಚುನಾವಣಾ ಆಯೋಗಕ್ಕೆ ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೆರಿಗಳಲ್ಲಿ ಚುನಾವಣೆ ನಡೆಸಲು ಅನುಕೂಲವಾಗಲಿದೆ.
ಫೆ.23ರಂದು ಪ್ರಾರಂಭವಾಗುವ ಅಧಿವೇಶನವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಲೋಕಸಭೆಯ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಫೆಬ್ರುವರಿ 25ರಂದು ರೈಲ್ವೆ ಬಜೆಟ್ ಮಂಡನೆಯಾಗಲಿದೆ.
ಫೆ.29ರಂದು ವಿತ್ತ ಸಚಿವ ಅರುಣ್ ಜೇಟ್ಲಿ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ರೈಲ್ವೆ ಸಚಿವ ಸುರೇಶ್ ಪ್ರಭು ರೈಲ್ವೆ ಬಜೆಟ್ ಅನ್ನು ಫೆ.25ರಂದು ಮಂಡಿಸಲಿದ್ದಾರೆ.
ಸಂಸತ್ ನ ಕಳೆದ 2 ಅಧಿವೇಶನದಲ್ಲಿ ಪ್ರತಿಪಕ್ಷಗಳು ಆಡಳಿತಾರೂಢ ಎನ್ ಡಿಎ ಸರ್ಕಾರದ ವಿರುದ್ಧ ಗದ್ದಲ, ಕೋಲಾಹಲ ನಡೆಸಿದ್ದವು. ಇದರಿಂದಾಗಿ ಸಂಸತ್ ಕಲಾಪ ಗದ್ದಲದಲ್ಲಿಯೇ ಅಂತ್ಯವಾಗಿತ್ತು.