ಚೆನ್ನೈ : ಪ್ರವಾಹದಿಂದಾಗಿ ನಲುಗಿರುವ ತಮಿಳುನಾಡು ರಾಜಧಾನಿ ಚೆನ್ನೈ ಶನಿವಾರ ಸಹಜ ಸ್ಥಿತಿಯತ್ತ ಮರಳಲು ಪ್ರಯತ್ನಿಸುತ್ತಿದೆ. ಭಾಗಶಃ ದೂರಸಂಪರ್ಕ ಮತ್ತು ರೈಲು ಸಂಚಾರ ಪ್ರಾರಂಭವಾಗಿದೆ. ಕೆಲವು ಪ್ರದೇಶಗಳಲ್ಲಿ, ರಸ್ತೆಯ ಮೇಲೆ ನೀರು ನಿಂತಿದ್ದರೂ, ವಾಹನಗಳು ಸಂಚರಿಸಬಹುದು.
ತಮಿಳುನಾಡು ಸರ್ಕಾರದ ಪ್ರಕಾರ, ಧಾರಾಕಾರ ಸುರಿದ ಮಳೆಗೆ ಅಕ್ಟೋಬರ್ 1 ರಿಂದ ಇಲ್ಲಿಯವರೆಗೆ ಒಟ್ಟು 245ಜನ ಸಾವನ್ನಪ್ಪಿದ್ದಾರೆ. ಕಳೆದ ಮಂಗಳವಾರ ಸುರಿದ ಮಳೆಗೆ ಬಹುತೇಕ ಎಲ್ಲಾ ಪ್ರದೇಶಗಳೂ ಜಲಾವೃತವಾಗಿದ್ದವು. ಇದರಿಂದ ರೈಲ್ವೆ ಸಂಪರ್ಕ, ವಿಮಾನ ನಿಲ್ದಾಣ, ವಿದ್ಯುತ್, ದೂರಸಂಪರ್ಕ ಮತ್ತು ಇನ್ನಿತರ ಮೂಲಸೌಕರ್ಯಗಳಲ್ಲಿ ವ್ಯತ್ಯಯ ಉಂಟಾದ್ದರಿಂದ ಜನರು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿತ್ತು.
ಶನಿವಾರ ಮಳೆ ಕಡಿಮೆಯಾದ್ದರಿಂದ ಕಾರ್ಯನಿರ್ವಹಿಸುತ್ತಿರುವ ಕೆಲವು ಎಟಿಎಂ, ಪೆಟ್ರೋಲ್ ಬಂಕ್ ಗಳ ಮುಂದೆ ಉದ್ದದ ಸಾಲುಗಳನ್ನು ಕಾಣಬಹುದಾಗಿದೆ. ನಾಳೆ ಭಾನುವಾರವೂ ಸಹ ರಾಜ್ಯದಲ್ಲಿ ಬ್ಯಾಂಕ್ ಗಳು ಕೆಲಸ ನಿರ್ವಹಿಸಲಿವೆ. ಹಾಲಿನ ಸಮಸ್ಯೆ ಮುಂದುವರಿದಿದ್ದು, ತರಕಾರಿಗಳ ಬೆಲೆ ಗಗನಕ್ಕೇರಿದೆ.