ಬೆಂಗಳೂರು : ಈ ವರ್ಷ ಸಂಕ್ರಾತಿಯಂದು ಶುಕ್ರವಾರ, ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಗೋಮಹೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜನರ ಮನೆ-ಮನಗಳಿಂದ ದೂರವಾಗುತ್ತಿದ್ದ ಭಾರತೀಯ ಗೋವಂಶವನ್ನು ಗೋಯಾತ್ರೆ, ಗೋಸಂಸತ್,ವಿಶ್ವ ಗೋ ಸಮ್ಮೇಳನ, ವಿಶ್ವಮಂಗಲ ಗೋಗ್ರಾಮಯಾತ್ರೆ ಮುಂತಾದ ಕಾರ್ಯಕ್ರಮ ವೈವಿಧ್ಯಗಳಮೂಲಕ ಗೋವಿನ ಕುರಿತಾಗಿ ಅರಿವನ್ನು ಮೂಡಿಸಿ, ಜಾಗತಿಕ ಮಟ್ಟದ ಗೋಷ್ಠಿಗಳ ಮೂಲಕ ಗೋಜಾಗೃತಿಯನ್ನು ಉಂಟು ಮಾಡಿದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಪ್ರಸ್ತುತ 'ಗೋಮಹೋತ್ಸವ' ಎಂಬ ಅಭಿಯಾನಕ್ಕೆ ಮುಂದಾಗಿದ್ದಾರೆ.
ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿರುವ, ದೇಶದ ಆರ್ಥಿಕ - ಸಾಮಾಜಿಕ - ಧಾರ್ಮಿಕ ಜಗತ್ತಿನ ಬೆನ್ನೆಲುಬಾದ ಭಾರತೀಯ ಗೋವಿನ ಕುರಿತಾಗಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಸಮಾಜದ ಸ್ವಾಸ್ಥ್ಯಕ್ಕಾಗಿ ಹತ್ತಾರು ಸಮಾಜಮುಖೀ ಯೋಜನೆಗಳನ್ನು ಸಂಕಲ್ಪಿಸಿದವರು. ಭಾರತೀಯ ಗೋವಂಶದ ಸಂರಕ್ಷಣೆ-ಸಂವರ್ಧನೆ-ಸಂಶೋಧನೆ-ಸಂಬೋಧನೆಗಳೆಂಬ ಮಹತ್ತರವಾದ ಆಶಯಗಳೋಂದಿಗೆ ಕಾರ್ಯಾಚರಿಸುತ್ತಿರುವ ‘ಕಾಮದುಘಾ’ ಶ್ರೀಗಳ ಮಹತ್ವದ ಯೋಜನೆಗಳಲ್ಲೋಂದು. ಪ್ರಕೃತ ‘ಕಾಮದುಘಾ’ ಯೋಜನೆಯ ವಾರ್ಷಿಕ ದಿನವನ್ನು ‘ಗೋಮಹೋತ್ಸವ’ವಾಗಿ ಆಚರಿಸಲಾಗುತ್ತಿದೆ.
ಈ ಬಾರಿ ಸಂಕ್ರಾಂತಿ ಹಬ್ಬದ ಮೆರುಗನ್ನು ಹೆಚ್ಚಿಸಲೋ ಎಂಬಂತೆ ಸಂಕ್ರಾಂತಿಯ ದಿನದಂದು ಕಾಮದುಘಾ ತನ್ನ ವಾರ್ಷಿಕ ದಿನವನ್ನು ಗೋಕೇಂದ್ರಿತ ಜೀವನ ಕ್ರಮವನ್ನು ಅನಾವರಣಗೋಳಿಸುವ ಸಲುವಾಗಿ 'ಗೋಮಹೋತ್ಸವ'ವಾಗಿ ಆಚರಿಸಿಸಲಾಗುತ್ತಿದ್ದು, ಸಾಂಸ್ಕೃತಿಕ-ಆರ್ಥಿಕ-ಧಾರ್ಮಿಕ ಜಗತ್ತಿನ ಜೀವನಾಡಿಯಾದ ಗೋವುಗಳ ಪ್ರಾಮುಖ್ಯತೆಯನ್ನು ಜನಮಾನಸಕ್ಕೆ ಸಾರಿಹೇಳುವ ದಿಶೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವೈಶಿಷ್ಟ್ಯಪೂರ್ಣವಾದ ವೈಚಾರಿಕ- ಸಾಂಸ್ಕೃತಿಕ – ಧಾರ್ಮಿಕ ಕಾರ್ಯಕ್ರಮ ವಿಶೇಷಗಳ ಮೂಲಕ 'ಗೋಮಹೋತ್ಸವ' ಸಂಪನ್ನವಾಗಲಿದ್ದು, ಈ ಎಲ್ಲಾ ವೈವಿಧ್ಯಭರಿತವಾದ ಕಾರ್ಯಕ್ರಮಗಳು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗಿನ ಎಲ್ಲಾ ವಯೋಮಾನದವರ ಮನಸಿನಲ್ಲಿ ಗೋವಿನ ಚಿತ್ರಣವನ್ನು ಕಟ್ಟಿಕೊಡುವುದರ ಜೊತೆಗೆ, ಗೋ ಕೇಂದ್ರಿತವಾದ ಸಮಗ್ರ ಜೀವನಕ್ರಮವನ್ನು ಪರಿಚಯಿಸಲಿದೆ.