ಬೆಂಗಳೂರು : 67ನೇ ಗಣರಾಜ್ಯೋತ್ಸವದ ಮುನ್ನಾದಿನವಾದ ಸೋಮವಾರ ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವಿಜ್ಞಾನ-ತಂತ್ರಜ್ಞಾನ, ಸಮಾಜ ಸೇವೆ, ವೈದ್ಯಕೀಯ, ಸರ್ಕಾರಿ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ದೇಶದ ಗಣ್ಯರಿಗೆ ನೀಡಲಾಗುವ ಪದ್ಮ ಪ್ರಶಸ್ತಿಗಳು ಪ್ರಕಟವಾಗಿವೆ.
ಈ ಬಾರಿ 10 ಪದ್ಮವಿಭೂಷಣ, 19 ಪದ್ಮಭೂಷಣ, 83 ಪದ್ಮಶ್ರೀ ಸೇರಿ ಒಟ್ಟು 112 ಪದ್ಮ ಪ್ರಶಸ್ತಿ ಪ್ರಕಟಿಸಲಾಗಿದೆ.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ, ಖ್ಯಾತ ವಿಜ್ಞಾನಿ ಡಾ|ವಿ.ಕೆ.ಅತ್ರೆ ಅವರಿಗೆ ಪದ್ಮವಿಭೂಷಣ ಲಭಿಸಿದೆ.
ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ, ಮೂಲತಃ ರಾಯಚೂರಿನವರಾದ ಬಾಹುಬಲಿ ಚಿತ್ರದ ನಿರ್ದೇಶಕ ಎಸ್.ಎಸ್.ರಾಜಮೌಳಿ, ಖ್ಯಾತ ಹಿಂದುಸ್ತಾನಿ ಗಾಯಕ ಎಂ.ವೆಂಕಟೇಶ್ ಕುಮಾರ್, ಹುಬ್ಬಳ್ಳಿಯ ಖ್ಯಾತ ನೇತ್ರತಜ್ಞ ಡಾ|ಎಂ.ಎಂ.ಜೋಶಿ, ಬೆಂಗಳೂರಿನ ಮೂಳೆತಜ್ಞ ಡಾ|ಜಾನ್ ಎಬ್ನೇಜರ್, ಪ್ರಧಾನಿ ನರೇಂದ್ರ ಮೋದಿ ಅವರ ಯೋಗಗುರು ಡಾ|ಎಚ್.ಆರ್.ನಾಗೇಂದ್ರ, ಇಸ್ರೋ ವಿಜ್ನಾನಿ ಡಾ|ಎಂ.ಅಣ್ಣಾದೊರೈ, ಐಐಎಸ್ಸಿ ವಿಜ್ಞಾನಿ ದೀಪಂಕರ ಚಟರ್ಜಿ ಮತ್ತು ಮಧ್ಯಾಹ್ನದ ಬಿಸಿಯೂಟ ಅಕ್ಷಯಪಾತ್ರಾ ಖ್ಯಾತಿಯ ಬೆಂಗಳೂರು ಇಸ್ಕಾನ್ ಮುಖ್ಯಸ್ಥ ಮಧುಪಂಡಿತ ದಾಸ್ ಅವರು ಕರ್ನಾಟಕದ ಪದ್ಮಶ್ರೀ ವಿಜೇತರು.
ಇನ್ನು ಬೆಂಗಳೂರು ಮೂಲದವರಾದ ತಮಿಳಿನ ಸೂಪರ್ಸ್ಟಾರ್ ರಜನೀಕಾಂತ್ ಅವರಿಗೆ ಪದ್ಮವಿಭೂಷಣ, ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾಡ್ಮಿಂಟನ್ ಪಟು ಸೈನಾ ನೆಹ್ವಾಲ್ಗೆ ಪದ್ಮಭೂಷಣ ಮತ್ತು ಮೈಸೂರಲ್ಲಿ ಜನಿಸಿದ ದಿಲ್ಲಿ ನಿವಾಸಿ, ಖ್ಯಾತ ನೃತ್ಯಪಟು ಪ್ರತಿಭಾ ಪ್ರಹ್ಲಾದ್ ಅವರಿಗೆ ಪದ್ಮಶ್ರೀ ಗೌರವ ಸಂದಿದೆ.
ಒಟ್ಟು 11 ಪದ್ಮ ಪ್ರಶಸ್ತಿಗಳು ಕರ್ನಾಟಕಕ್ಕೆ ಪ್ರಾಪ್ತವಾಗಿದೆ.