March 23, 2016
ಸೇವೆ ಮಾಡಬೇಕಾದುದು ನಮ್ಮ ಒಳ್ಳೆಯದಕ್ಕೆ ಹೊರತು ಬೇರೆಯವರ ಉಪಕಾರಕ್ಕಲ್ಲಃ ರಾಘವೇಶ್ವರ ಶ್ರೀ
ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ದಿವ್ಯ ಸಾನಿಧ್ಯದಲ್ಲಿ ತೀರ್ಥರಾಜ ಪೂಜೆ
ಬೆಂಗಳೂರು : ಇಂದು ದುಃಖದ ದಿನ ಅಲ್ಲ, ಮುಕ್ತಿಯಷ್ಟು ಶ್ರೇಷ್ಠವಾದುದು ಇನ್ನೊಂದಿಲ್ಲ. ಒಂದು ಮಹಾನ್ ಚೇತನ ಪಂಚಭೂತಗಳಲ್ಲಿ ಲೀನವಾದ ದಿನ-ಭಗವಂತನಲ್ಲಿ ಒಂದಾದ ದಿನ. ತಮ್ಮ ಬದುಕನ್ನು ಪೂರ್ಣಗೊಳಿಸಲು, ಪರಿಪೂರ್ಣರಾಗಿದ್ದ ಅವರು ಪೌರ್ಣಮಿಯನ್ನೇ ಆಯ್ದುಕೊಂಡರು. ಅವರ ಆದರ್ಶಗಳು ನಮಗೆ ಅತ್ಯವಶ್ಯಕ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ನುಡಿದರು.
ಗಿರಿನಗರದ ಶ್ರೀರಾಮಶ್ರಮದಲ್ಲಿ ನಡೆದ ಬ್ರಹ್ಮಲೀನ ಜಗದ್ಗುರು ಶಂಕರಾಚಾರ್ಯ ಶ್ರೀ ರಾಮಚಂದ್ರ ಭಾರತೀ ಸ್ವಾಮೀಜಿಯವರ ಆರಾಧನಾ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು, ಇದು ವಿಷಾದದ ದಿನವಲ್ಲ. ತಮ್ಮ ಹಿರಿಯ ಗುರುಗಳು ಬ್ರಹ್ಮಲೀನರಾದ ದಿನ, ಪರಮಪದವನ್ನು ಸೇರಿದ ದಿನ. ಅವರು ನಮ್ಮ ನೆನಪಿನಲ್ಲಿ ಇರಬೇಕು, ಅವರಿಗಾಗಿ ಅಲ್ಲ- ನಮ್ಮ ಶ್ರೇಯಸ್ಸಿಗಾಗಿ. ಸೇವೆ ಮಾಡಬೇಕಾದುದು ನಮ್ಮ ಒಳ್ಳೆಯದಕ್ಕೆ ಹೊರತು ಬೇರೆಯವರ ಉಪಕಾರಕ್ಕಲ್ಲ ಎಂದರು.
ಇದಕ್ಕೂ ಮುನ್ನ 16 ಜನ ವಿಪ್ರೋತ್ತಮರಿಗೆ ಫಲಕಾಣಿಕೆ ಸಮರ್ಪಿಸಿ-ಭೋಜನ ನೀಡಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ತೀರ್ಥರಾಜ ಪೂಜೆಯನ್ನು ನೆರವೇರಿಸುವ ಮೂಲಕ ಆರಾಧನೆಯ ಮಹೋತ್ಸವ ನೆರವೇರಿಸಲಾಯಿತು. ಆರಾಧನಾ ಸೇವೆ ಶ್ರೀಸೇವಾ ಗುರುಭಕ್ತ ಬಳಗದಿಂದ ನೆರವೇರಿತು.
ನಂತರದಲ್ಲಿ ವಿಶೇಷವಾಗಿ ಶ್ರೀ ರಾಮಚಂದ್ರಭಾರತಿ ಸ್ವಾಮೀಜಿಯವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು. ನಿಸ್ರಾಣಿ ರಾಮಚಂದ್ರ ಹಾಗೂ ಕೆಕ್ಕಾರ್ ರಾಮಚಂದ್ರರ ಅವರುಗಳು ಕಾರ್ಯಕ್ರಮ ನಡೆಸಿಕೊಟ್ಟರು, ವಿದ್ವಾನ್ ಜಗದೀಶ ಶರ್ಮ ನಿರ್ವಹಣೆ ಮಾಡಿದರು.
ಶ್ರೀ ರಾಮಚಂದ್ರಭಾರತಿ ಸ್ವಾಮೀಜಿಯವರ ಸಂಸ್ಮರಣೆ ಕಾರ್ಯಕ್ರಮ
ನಿಸ್ರಾಣಿ ರಾಮಚಂದ್ರ ಅವರು ಮಾತನಾಡಿ, ಹೊರಗಿನ ವಾತಾವರಣ ಬಹಳ ಸಹಜವಾಗಿರುವಾಗ ಇಂತಹ ಧರ್ಮಪೀಠಗಳನ್ನು ಮುನ್ನಡೆಸುವುದು ಬಹಳ ಕ್ಲಿಷ್ಟಕರವೇನಲ್ಲ ಆದರೆ ಹೊರವಲಯದ ಪರಿಸ್ದಿತಿ ಬಹಳ ಪ್ರಕ್ಷುಬ್ಧವಾಗಿದ್ದಾಗ ಪೀಠವನ್ನು ಮುನ್ನಡೆಸುವುದು ಬಹಳ ಕಷ್ಟಕರ ಹಾಗೂ ಮಹಾತ್ಮರಿಗೆ ಮಾತ್ರ ಸಾಧ್ಯವಾಗುವಂಥದ್ದು.ಅಂಥ ಪರಿಸ್ಥಿತಿಯಲ್ಲಿ ಪರಮಪೂಜ್ಯ ರಾಮಚಂದ್ರ ಭಾರತೀ ಮಹಾಸ್ವಾಮಿಗಳು. ತಮ್ಮ ಗುರುಗಳಿಂದ ಅನುಗ್ರಹಿತವಾದ ಆನೆಯ ಕಾಲದ ನಂತರ ಅದರ ದಂತಗಳು ವ್ಯರ್ಥವಾಗಬಾರದೆಂಬ ಉದ್ದೇಶದಿಂದ ತಮಗೆ ಅತ್ಯಂತ ಬಡತನವಿದ್ದರೂ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಸ್ತಿದಂತ ಸಿಂಹಾಸನವನ್ನು ನಿರ್ಮಿಸಿದರು. ಇದು ಅವರ ಗುರುನಿಷ್ಠೆಯನ್ನು ಸೂಚಿಸುತ್ತದೆ ಎಂದರು
ರಾಯರ ಮನೆಯ ಕೆಕ್ಕಾರು ರಾಮಚಂದ್ರ ಭಟ್ಟ ರವರು ತಮ್ಮ ತಂದೆಯವರ ಮೇಲೆ ರಾಮಚಂದ್ರ ಭಾರತಿಗಳು ತೋರಿದ ಕರುಣೆಯ ಘಟನೆಗಳನ್ನು ಹಂಚಿಕೊಂಡರು.ತಮ್ಮ ತಂದೆಯವರು ಗುರುಗಳ ಮಡಿಲ ಶಿಶುವಾಗಿ ಬೆಳೆದರು ಅಂತಹ ಒಬ್ಬ ಪುಣ್ಯವಂತರು ಅವರು.ಈಗಿನ ಪೀಠಾಧಿಪತಿಗಳಲ್ಲೂ ನಾವು ಅದೇ ಬಗೆಯ ಪ್ರೀತಿ ಕಾರುಣ್ಯಗಳನ್ನೈ ಕಾಣುತ್ತೇವೆಂದು ಅಭಿಪ್ರಾಯ ಪಟ್ಟರು.
ಶ್ರೀಕಾರ್ಯದರ್ಶಿಗಳಾದ ಮೋಹನ್ ಭಾಸ್ಕರ್ ಹೆಗಡೆ ಇವರು ನಿರೂಪಿಸಿದರು. ಶ್ರೀಸಂಸ್ಥಾನದ ಸಮ್ಮುಖ ಸರ್ವಾಧಿಕಾರಿಗಳಾದ ಶ್ರೀ ತಿಮ್ಮಪ್ಪಯ್ಯ ಮಡಿಯಾಲ್, ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಕೆಜ಼ಿ ಭಟ್, ಶ್ರೀಮಠದ ಪದಾಧಿಕಾರಿಗಳು, ಮಂಡಲ-ವಲಯಗಳ ಪ್ರಮುಖರು ಹಾಗೂ ಎಲ್ಲಾ ಭಾಗಗಳ ಶಿಷ್ಯಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.