ಡೆಹ್ರಾಡೂನ್ : ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ನೈನಿತಾಲ್ ಹೈಕೋರ್ಟ್ ತಡೆ ನೀಡಿದ್ದು, ಮಾರ್ಚ್ 31ರಂದು ಉತ್ತರಾಖಂಡ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಕಾಂಗ್ರೆಸ್ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರಿಂದಾಗಿ ಮುಖ್ಯಮಂತ್ರಿ ಹರೀಶ್ ರಾವತ್ ನಿರಾಳರಾದಂತಾಗಿದೆ.
ಮಾರ್ಚ್ 31ರಂದು ಬೆಳಗ್ಗೆ 11ಗಂಟೆಗೆ ಬಹುಮತ ಸಾಬೀತು ಪಡಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಬಹುಮತ ಸಾಬೀತಿನ ದಿನದಂದು ಎಲ್ಲಾ ಶಾಸಕರು ಹಾಜರಿರುವಂತೆ ಹೇಳಿದೆ. ಅಲ್ಲದೇ ಈ ಮೊದಲು ಉತ್ತರಾಖಂಡ್ ವಿಧಾನಸಭೆಯ ಸ್ಪೀಕರ್ ಅವರಿಂದ ಅಮಾನತುಗೊಂಡಿದ್ದ ಕಾಂಗ್ರೆಸ್ ಪಕ್ಷದ 9 ಬಂಡಾಯ ಶಾಸಕರಿಗೂ ಬಹುಮತ ಸಾಬೀತಿನಲ್ಲಿ ಭಾಗಿಯಾಗಲು ಕೋರ್ಟ್ ಅನುಮತಿ ನೀಡಿದೆ. ಅವರ ಮತವನ್ನು ಗುಪ್ತವಾಗಿಡುವಂತೆ ತಿಳಿಸಿದೆ. ಆದರೆ ಬಹುಮತ ಸಾಬೀತಿನ ನಂತರ ಫಲಿತಾಂಶವನ್ನು ಸ್ಪೀಕರ್ ಘೋಷಿಸುವಂತಿಲ್ಲ ಎಂದು ಸೂಚಿಸಿರುವ ಕೋರ್ಟ್, ಮತದಾನದ ಫಲಿತಾಂಶವನ್ನು ಸೀಲ್ಡ್ ಕವರ್ ನಲ್ಲಿ ಕೋರ್ಟ್ ಗೆ ಸಲ್ಲಿಸುವಂತೆ ತಿಳಿಸಿದೆ.
ಉತ್ತರಾಖಂಡ್ ನಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರದ 9 ಮಂದಿ ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ಬಿಜೆಪಿ ಜೊತೆ ಕೈಜೋಡಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಉತ್ತರಾಖಂಡ್ ನಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಶಿಫಾರಸು ಮಾಡಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಳ್ವಿಕೆಗೆ ಅಂಕಿತ ಹಾಕಿದ್ದರು. ಆದರೆ ರಾಷ್ಟ್ರಪತಿ ಆಳ್ವಿಕೆಯನ್ನು ಪ್ರಶ್ನಿಸಿ ಸಿಎಂ ಹರೀಶ್ ರಾವತ್ ಹೈಕೋರ್ಟ್ ಮೆಟ್ಟಿಲೇರಿದ್ದರು.
70 ಸದಸ್ಯ ಬಲದ ಉತ್ತರಾಖಂಡ ಸರ್ಕಾರದಲ್ಲಿ 9 ಮಂದಿ ಬಂಡಾಯ ಶಾಸಕರು ಸೇರಿ 36 ಸದಸ್ಯ ಬಲ ಹೊಂದಿತ್ತು. ಸಧ್ಯ ಕಾಂಗ್ರೆಸ್ ಬಲ 27. ಬಿಜೆಪಿ 28 ಶಾಸಕರನ್ನು ಹೊಂದಿದೆ. ಉಳಿದ 6 ಮಂದಿ ಶಾಸಕರು ಕಾಂಗ್ರೆಸ್ ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಆಂಗ್ಲೋ ಇಂಡಿಯನ್ ಸಮುದಾಯದ ಒಬ್ಬರು ಶಾಸಕರಿದ್ದಾರೆ.