ನವದೆಹಲಿ : ಭಾರತ್ ಮಾತಾ ಕಿ ಜೈ ಘೋಷಣೆ ವಿಚಾರ ಸಾಕಷ್ಟು ವಿವಾದಗಳನ್ನು ಸೃಷ್ಟಿಸುತ್ತಿದ್ದು, ಕೇಂದ್ರ ಸರ್ಕಾರ ಇದೇ ಮೊದಲುಬಾರಿಗೆ ತನ್ನ ಮೌನವನ್ನು ಮುರಿದಿದ್ದು, ನಾಯಕರು ನೀಡುತ್ತಿರುವ ಹೇಳಿಕೆಗಳು ಸರ್ಕಾರದ ಅಧಿಕೃತ ಅನಿಸಿಕೆಯಲ್ಲ ಎಂದು ಹೇಳಿದೆ.
ವಿವಾದ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಭಾರತ್ ಮಾತಾ ಕಿ ಜೈ ಸಂಬಂಧ ನಾಯಕರು ನೀಡುತ್ತಿರುವ ಹೇಳಿಕೆಗಳು ಅವರ ವೈಯಕ್ತಿಕ ಅನಿಸಿಕೆಯೇ ಹೊರತು, ಇದು ಸರ್ಕಾರದ ಅಧಿಕೃತ ಅಭಿಪ್ರಾಯವಲ್ಲ ಎಂದು ಹೇಳಿದ್ದಾರೆ.
ಭಾರತೀಯ ಮಹಿಳೆಯರ ಪ್ರೆಸ್ ಕಾರ್ಪ್ಸ್'ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ವಿವಾದ ಸಂಬಂಧ ಸರ್ಕಾರದ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರು ಸಾಕಷ್ಟು ವಿಷಯಗಳಿಗೆ ಸಾಕಷ್ಟು ಹೇಳಿಕೆಯನ್ನು ನೀಡುತ್ತಿರುತ್ತಾರೆ. ಆದರೆ, ಅಂತಿಮವಾಗಿ ಸರ್ಕಾರ ತನ್ನ ನಿರ್ಧಾರದ ಮೂಲಕ ಎಲ್ಲದಕ್ಕೂ ತೆರೆಯೆಳೆಯುತ್ತದೆ. ವಿವಾದವೊಂದು ಭಾವನಾತ್ಮಕ ವಿಚಾರ. ಆದರೆ, ಘೋಷಣೆ ಕೂಗಲೇಬೇಕೆಂಬ ಕಡ್ಡಾಯವಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಪಕ್ಷದ ನಾಯಕರು ವಿವಾದ ಸಂಬಂಧ ನೀಡುತ್ತಿರುವ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿರುವ ಅವರು, ಘೋಷಣಾ ವಾಕ್ಯವನ್ನು ಧನಾತ್ಮಕವಾಗಿ ಪರಿಗಣಿಸಬೇಕು. ಭಗತ್ ಸಿಂಗ್ ತಮ್ಮ ಕೊನೆ ಕ್ಷಣ ಗಲ್ಲಿಗೇರಬೇಕಾದ ಸಂದರ್ಭದಲ್ಲೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದರು. ಘೋಷಣೆ ವಾಕ್ಯ ಸ೦ವೇದನಾಶಕ್ತಿಯನ್ನು ಹೊಂದಿದೆ.ಭಾರತ್ ಮಾತಾ ಕಿ ಜೈ ಎಂಬುದು ಕೇವಲ ಘೋಷಣಾ ವಾಕ್ಯವಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸ್ಫೂರ್ತಿ ಮಂತ್ರ. ಲಕ್ಷಾಂತರ ಜನರ ಹೃದಯ ಬಡಿತ ಎಂದಿದ್ದಾರೆ.
ಈ ಹಿಂದಷ್ಟೇ ಮೋಹನ್ ಭಾಗವತ್ ಅವರು ಕಾರ್ಯಕ್ರಮವೊಂದರಲ್ಲಿ ಜೆಎನ್ ಯು ವಿವಾದ ಸಂಬಂಧ ಹೇಳಿಕೆಯೊಂದನ್ನು ನೀಡಿದ್ದರು. ಜೆಎನ್ ಯು ಆವರಣದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಲಾಗುತ್ತಿದ್ದು, ಪ್ರತಿಯೊಬ್ಬರು ಭಾರತ್ ಮಾತಾ ಕಿ ಜೈ ಹೇಳುವಂತಾಗಬೇಕೆಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಓವೈಸಿ ಕುತ್ತಿಗೆ ಮೇಲೆ ಚೂರಿ ಇಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ ಎಂದು ಹೇಳಿದ್ದರು. ಓವೈಸಿ ಹೇಳಿಕೆಗೆ ದೇಶದಾದ್ಯಂತ ಸಾಕಷ್ಟು ವಿರೋಧಗಳು ವ್ಯಕ್ತವಾದವು. ಇದೀಗ ಈ ವಿವಾದ ರಾಜಕೀಯ ಬಣ್ಣಪಡೆದುಕೊಂಡಿದೆ.